ಚಳ್ಳಕೆರೆ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿ ಮಾಡಿದವರಿಂದ ಜಿಲ್ಲಾ ಪಂಚಾಯ್ತಿ ಸಹಾಯಕ ಎಂಜಿನಿಯರ್ ಕಂಚೀಮಠ್ ಕಮೀಷನ್ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಿ ಸಾರ್ವಜನಿಕರು ಅವರನ್ನು ಮನೆಯಲ್ಲಿಯೇ ಶುಕ್ರವಾರ ಹಿಗ್ಗಾಮುಗ್ಗಾ ಎಳೆದಾಡಿ ಥಳಿಸಿದ ಪ್ರಸಂಗ ನಡೆಯಿತು.
ತಾಲ್ಲೂಕಿನ ಮೈಲಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಚಿತ್ರನಾಯಕನಹಳ್ಳಿಯಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಚೆಕ್ಡ್ಯಾಂ ಕಾಮಗಾರಿ ಸುಮಾರು 2 ತಿಂಗಳಿಂದ ಪೂರ್ಣಗೊಂಡಿದ್ದರೂ ಎಂಜಿನಿಯರ್ ಕಂಚೀಮಠ್ ಬಿಲ್ಗೆ ಸಹಿ ಹಾಕದೇ ಸತಾಯಿಸುತ್ತಿದ್ದರು ಎಂದು ಸಾರ್ವಜನಿಕರು ಆರೋಪಿಸಿದರು.
ಎಂಜಿನಿಯರ್ ಕಂಚೀಮಠ್ ಈ ಘಟನೆಯಿಂದಾಗಿ ಕೆಲ ಕಾಲ ವಿಚಲಿತರಾದವರಂತೆ ಕಂಡುಬಂದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರೋ ಅಪರಿಚಿತರು ಬಂದು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಯಾರಿಗೂ ಲಂಚ ಕೇಳಿಲ್ಲ. ಯಾರ ಹಣವನ್ನೂ ಮುಟ್ಟಿಲ್ಲ’ ಎಂದು ಹೇಳಿದರು.
ತಮ್ಮ ಟೇಬಲ್ ಮೇಲಿನ ಹಣ ಯಾರದು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ತಬ್ಬಿಬ್ಬಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.