ADVERTISEMENT

ವಚನ ಕಟ್ಟುಗಳ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ಲಿಂಗಸುಗೂರ: ಇಳಕಲ್ಲಿನ ಲಿಂಗೈಕ್ಯ ವಿಜಯಮಹಾಂತ ಶಿವಯೋಗಿಗಳ 101ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಸ್ಥಳೀಯ ವಿಜಯಮಹಾಂತೇಶ್ವರ ಶಾಖಾ ಮಠದಲ್ಲಿ ಹದಿನೈದು ದಿನಗಳಿಂದ ಶರಣ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೊನೆಯ ದಿನವಾದ ಭಾನುವಾರ ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಶರಣರ ವಿಚಾರಧಾರೆಯ ವಚನ ಕಟ್ಟು ಹಾಗೂ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಬೆಳಿಗ್ಗೆ ಕಲ್ಯಾಣ ಮಹೋತ್ಸವ ನೆರವೇರುತ್ತಿದ್ದಂತೆಯೇ ಅಡ್ಡಪಲ್ಲಕ್ಕಿಗೆ ಬೆಳ್ಳಿ ಆಭರಣಗಳು, ವೈವಿಧ್ಯಮಯ ಹೂವುಗಳಿಂದ ಅಲಂಕಾರ ಮಾಡಲಾಯಿತು.

ಅಲಂಕೃತ ಪಲ್ಲಕ್ಕಿಯಲ್ಲಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಹಾಗೂ ವಚನ ಕಟ್ಟುಗಳನ್ನಿಟ್ಟು ಪೂಜೆ ಸಲ್ಲಿಸುತ್ತಿದ್ದಂತೆ ಛತ್ರಿ, ಚಾಮರಗಳ ಸಮೇತ ಜಯಘೋಷಗಳ ಮಧ್ಯೆ ಮೆರವಣಿಗೆಗೆ ವಿವಿಧ ಮಠಗಳ ಮಠಾಧೀಶರು ವಿದ್ಯುಕ್ತ ಚಾಲನೆ ನೀಡಿದರು.

ಮರಗಾಲು ಕುಣಿತ, ಕುದುರೆ ಕುಣಿತ, ಭಜನೆಯಲ್ಲಿ ಎತ್ತಿನ ಕುಣಿತ, ಗಾರುಡಿಗ ಗೊಂಬೆಗಳು, ಪೂಜಾ ಕುಣಿತ, ತಮಟೆ ತಂಡ, ವೀರಗಾಸೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳು ಹಾಡಿಗೆ ಹೆಜ್ಜೆ ಹಾಕುತ್ತ ಮಾಡುತ್ತಿರುವ ನೃತ್ಯಗಳು ನಾಗರಿಕರ ಮನಸ್ಸುಗಳನ್ನು ಸೂರೆಗೊಂಡವು. ರಸ್ತೆಯುದ್ದಕ್ಕೂ ಪಲ್ಲಕ್ಕಿಗೆ ಪೂಜೆ ಪುನಸ್ಕಾರ ಸಲ್ಲಿಸುತ್ತಿರುವುದು ಕಂಡು ಬಂದಿತು.

ಮೆರವಣಿಗೆ ಬಸವಸಾಗರ ವೃತ್ತ, ಗಡಿಯಾರ ವೃತ್ತ, ಅಂಚೆಕಚೇರಿ, ಬಸ್ ನಿಲ್ದಾಣ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ಶಾಖಾ ಮಠದತ್ತ ತೆರಳಿತು. ಮೆರವಣಿಗೆ ಮುಕ್ತಾಯಗೊಳ್ಳುತ್ತಿದ್ದಂತೆ ಅನ್ನಸಂತರ್ಪಣೆ ನಡೆಸಲಾಯಿತು. ಸಂಜೆ ಶರಣ ಸಂಸ್ಕೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು. ನಾಡಿನ ಹರಗುರು ಚರಮೂರ್ತಿಗಳು, ಶರಣರು, ಗಣ್ಯರು ಪಾಲ್ಗೊಂಡಿದ್ದರು.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.