ಗುಲ್ಬರ್ಗ: ನಗರದಲ್ಲಿರುವ ವಸತಿ ರಹಿತ ಜನರನ್ನು ಹುಡುಕಿ, ಅವರಿಗೆ ನಿವೇಶನ ನೀಡುವ ಯೋಜನೆ ರೂಪಿಸುವುದಾಗಿ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ಭರವಸೆ ನೀಡಿದರು.
ಲಾಟರಿ ಆಯ್ಕೆಯಲ್ಲಿ ಅದೃಷ್ಟ ಇದ್ದವರಿಗೆ ನಿವೇಶನ ಸಿಗುತ್ತದೆ. ಹಣ ಇದ್ದವರು ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ನಿವೇಶನ ಪಡೆಯುತ್ತಾರೆ. ಆದರೆ ಅದೃಷ್ಟ ಅಥವಾ ಹಣ ಇಲ್ಲದವರ ವರ್ಗವೊಂದಿದೆ. ಇಂಥವರಿಗಾಗಿ ಯೋಜನೆ ರೂಪಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಪ್ರಾಧಿಕಾರದ 25ನೇ ಅಧ್ಯಕ್ಷರಾಗಿ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ವಿವಿಧ ನಗರಗಳಲ್ಲಿ ಪ್ರಾಧಿಕಾರಗಳು ಬಡಾವಣೆ ನಿರ್ಮಾಣಕ್ಕೆ ಹೊಸ ಹೊಸ ಯೋಜನೆ ರೂಪಿಸಿಕೊಂಡಿವೆ. ಪ್ರಾಧಿಕಾರದಲ್ಲಿ ಸಾಕಷ್ಟು ಹಣ ಇಲ್ಲದಿದ್ದರೂ ಇಂಥ ವಿನೂತನ ಯೋಜನೆಗಳನ್ನು ಕೈಗೆತ್ತಿಕೊಂಡು ವಸತಿರಹಿತರಿಗೆ ನಿವೇಶನ ಕೊಡಲಾಗಿದೆ. ಇಂಥ ಯೋಜನೆಗಳ ಕುರಿತು ಇನ್ನು ಕೆಲವು ದಿನಗಳಲ್ಲಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ವಿವರಿಸಿದರು.
ನಗರದ ಹೊರ ವಲಯದಲ್ಲಿ ಅನೇಕ ಬಡಾವಣೆಗಳನ್ನು ನಿರ್ಮಿಸಿದ ಬಳಿಕ ನೀರು, ಚರಂಡಿ, ರಸ್ತೆ, ಬೀದಿ ದೀಪದಂಥ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ಅಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಇನ್ನು ಮುಂದೆ ಇಂಥ ಅಕ್ರಮ ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ನೇಹಿತರ ದಂಡು ಆಗಮಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.