ಹುಬ್ಬಳ್ಳಿ: ಆದಾಯ ಸೋರಿಕೆ ತಡೆಗಟ್ಟಿ, ಸಂಸ್ಥೆಯಲ್ಲಿ ಶಿಸ್ತು ತಂದ ಪರಿಣಾಮವಾಗಿ ಕರ್ನಾಟಕ ರಾಜ್ಯ ವಾಯವ್ಯ ಸಾರಿಗೆಯು ಇಂದು ಸಾವಿರ ಕೋಟಿ ರೂಪಾಯಿಗಳ ಆದಾಯ ವಹಿವಾಟು ದಾಖಲಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಜಗದೀಶ ಶೆಟ್ಟರ ತಿಳಿಸಿದರು.
ನಗರದ ಭಂಡವಾಡ ಅಗಸಿ ಬಳಿ ನಗರ ಸಾರಿಗೆ ಬಸ್ ನಿಲ್ದಾಣದ (ಸಿಬಿಟಿ) ನೂತನ ಕಟ್ಟಡಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಷ್ಟದಲ್ಲಿದ್ದ ವಾಯವ್ಯ ಸಾರಿಗೆಯು ಈಗ ಲಾಭದತ್ತ ಮುನ್ನಡೆಯುತ್ತಿರುವುದಲ್ಲದೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿಯಂತೆ 1000 ಕೋಟಿ ರೂ. ಆದಾಯ ವಹಿವಾಟು ದಾಟಿರುವುದು ಹೆಮ್ಮೆಯ ಸಂಗತಿ ಎಂದು ಅವರು ನುಡಿದರು.
ಸಿಬಿಟಿಯ ಹೊಸ ಕಟ್ಟಡ ನಿರ್ಮಾಣವು 2.65 ಕೋಟಿ ವೆಚ್ಚದಲ್ಲಿ ಒಂದು ವರ್ಷದಲ್ಲಿ ನಿರ್ಮಾಣವಾಗಲಿದೆ. ನಾಲ್ಕು ಆರ್ಸಿಸಿ ಬಸ್ ಶೆಲ್ಟರ್ ಹಾಗೂ 21 ವಾಣಿಜ್ಯ ಮಳಿಗೆಗಳ ಸುಸಜ್ಜಿತ ನಿಲ್ದಾಣ ಇದಾಗಲಿದೆ. ಬಿಆರ್ಟಿಸಿಯಿಂದ ಅವಳಿನಗರದ ಅಭಿವೃದ್ಧಿಯಾಗಲಿದೆ. ಎರಡನೇ ಹಂತದಲ್ಲಿ ಗೋಕುಲ ರಸ್ತೆಯ ಕೇಂದ್ರ ಬಸ್ ನಿಲ್ದಾಣ ಹಾಗೂ ಸಿಬಿಟಿಯನ್ನು ಸಂಪರ್ಕಿಸುವ ಯೋಜನೆ ಇದೆ. ಕಳೆದ ಮೂರು ವರ್ಷಗಳಲ್ಲಿ ವಾಯವ್ಯ ಸಾರಿಗೆಗೆ 1900 ಬಸ್ಗಳು ದೊರೆತಿದ್ದು, 2012-13ನೇ ಸಾಲಿನಲ್ಲಿ 700 ಬಸ್ಗಳು ಸೇರ್ಪಡೆಯಾಗಲಿವೆ ಎಂದು ಅವರು ತಿಳಿಸಿದರು.
ಹುಬ್ಬಳ್ಳಿಯಿಂದ ಬೀದರ್, ಬೆಂಗಳೂರು, ಚಿಂತಾಮಣಿ ಮಾರ್ಗದಲ್ಲಿ ನಾಲ್ಕು ನೂತನ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಸಂಸದ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
ಶಾಸಕ ವೀರಭದ್ರಪ್ಪ ಹಾಲಹರವಿ ಅಧ್ಯಕ್ಷತೆ ವಹಿಸಿದ್ದರು. ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಮೇಯರ್ ಡಾ.ಪಾಂಡುರಂಗ ಪಾಟೀಲ, ಉಪಮೇಯರ್ ಭಾರತಿ ಪಾಟೀಲ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.