ADVERTISEMENT

ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ರಾಯಚೂರು: ವಿಜ್ಞಾನ ಎಂಬುದು ಈಗ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಆದರೆ, ವಿಜ್ಞಾನದ ಬಗ್ಗೆ ಚಿಂತನೆ ಮಾಡಿ ಮತ್ತಷ್ಟು ಅರಿಯುವ ಪ್ರಯತ್ನ ಮಾಡಬೇಕಾಗಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ. ಪಾಟೀಲ್ ಹೇಳಿದರು.

ಇಲ್ಲಿನ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಡೆಮಿ, ಗುಲ್ಬರ್ಗದ ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನ ಮತ್ತು ರಾಯಚೂರಿನ ವಿಜ್ಞಾನ ಶಿಕ್ಷಣ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2012 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ತಜ್ಞರಿಂದ ಸೂಕ್ತ ರೀತಿ ಮಾಹಿತಿ ಪಡೆದುಕೊಳ್ಳಬೇಕು. ಸೌರ ಶಕ್ತಿ, ಜೈವಿಕ ಇಂಧನ ಬಳಕೆ, ಇರುವಷ್ಟು ಭೂಮಿಯಲ್ಲಿಯೇ ಜನಸಂಖ್ಯೆಗೆ ತಕ್ಕಷ್ಟು ಆಹಾರ ಉತ್ಪಾದನೆ ಮಾಡಬಹುದಾದ ಅಂಶಗಳನ್ನು ವಿಜ್ಞಾನಿಗಳು, ಕೃಷಿ ವಿಜ್ಞಾನಿಗಳು ತಮ್ಮ ಸಂಶೋಧನೆಗಳ ಮೂಲಕ ಜಗತ್ತಿಗೆ ಕೊಟ್ಟಿದ್ದಾರೆ. ಆ ದಿಶೆಯಲ್ಲಿ ಜಗತ್ತು ಹೆಜ್ಜೆ ಇರಿಸಿದರೆ ಭವಿಷ್ಯದ ಆತಂಕಗಳಿಂದ ಸ್ವಲ್ಪ ಬಚಾವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿವಿಯ ವಿಜ್ಞಾನ ನಿಕಾಯದ ಡೀನ್ ಡಾ. ರಾಜಾಸಾಬ್, ಡಾ. ಅನಿಲ್‌ಕುಮಾರ್ ಕೊಪ್ಪಳಕರ್ ಅವರು ಶುದ್ಧ ಇಂಧನ ಮೂಲದ ಆಯ್ಕೆಗಳು ಮತ್ತು ಪರಮಾಣು ಶಕ್ತಿಯ ಸುರಕ್ಷತೆ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಪ್ರೊ.ಸಿ.ಡಿ. ಪಾಟೀಲ ವಹಿಸಿದ್ದರು. ಬಸಪ್ಪ ಗದ್ದಿ  ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.