ADVERTISEMENT

ವಿಶ್ವಕರ್ಮ ಜನಾಂಗ ಅಭಿವೃದ್ಧಿ:ಭರವಸೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST
ವಿಶ್ವಕರ್ಮ ಜನಾಂಗ ಅಭಿವೃದ್ಧಿ:ಭರವಸೆ
ವಿಶ್ವಕರ್ಮ ಜನಾಂಗ ಅಭಿವೃದ್ಧಿ:ಭರವಸೆ   

ಕನಕಪುರ: ಸಮಾಜಕ್ಕೆ ಅಡಿಗಲ್ಲು ಇಟ್ಟು, ತನ್ನದೆ ಆದ ಸ್ಥಾನಮಾನ ನೀಡಿರುವ ವಿಶ್ವಕರ್ಮ ಸಮಾಜ ಬಹಳ ಪವಿತ್ರವಾದುದು. ಸಮುದಾಯದ ಪ್ರತಿಯೊಬ್ಬರು ಆ ಧರ್ಮವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಶಾಸಕ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

ಪಟ್ಟಣದಲ್ಲಿ ತಾಲ್ಲೂಕು ವಿಶ್ವಕರ್ಮ ಮಹಾ ಮಂಡಲದವತಿಯಿಂದ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ ಮತ್ತು ವಿಶ್ವಕರ್ಮ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಕರ್ಮ ಸಂಘಟನೆ ಎರಡು ಭಾಗಗಳಾಗಿವೆ. ಇದರಿಂದ ಆ ಜನಾಂಗವು ಅಭಿವೃದ್ದಿ  ಹೊಂದಲು ಸಾಧ್ಯವಾಗುತ್ತಿಲ್ಲ. ಜನಾಂಗದ ಗುರುಗಳು ಎರಡು ಸಂಘಟನೆಗಳನ್ನು ಒಗ್ಗೂಡಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ವಿಶ್ವಕರ್ಮ ಮಹಾ ಮಂಡಲದ ರಾಜ್ಯ ಘಟಕದ ಅಧ್ಯಕ್ಷ ಎಲ್.ನಾಗರಾಜಾಚಾರ್ ಮಾತನಾಡಿ ವಿಶ್ವಕರ್ಮ ಜನಾಂಗವು  ಹಿಂದೆ ಉಳಿದಿದೆ. ನಮ್ಮ ಸಮಾಜವನ್ನು ಅಭಿವೃದ್ದಿ ಪಡಿಸುವುದರ ಜೊತೆಗೆ ಉನ್ನತ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಸಹಾಯ ಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
 `ನಾವು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿದ್ದೆೀವೆ.

ಕಸುಬುಗಳಲ್ಲೆ ನಿರತರಾಗಿರುವ ವಿಶ್ವಕರ್ಮ ಜನಾಂಗದ ಕುಂದು ಕೊರತೆಯನ್ನು ನಿವಾರಿಸಲು ಸರ್ಕಾರದ ಗಮನ ಸೆಳೆಯಲು ಗ್ರಾಮ ಪಂಚಾಯಿತಿ ಜಿಲ್ಲಾ ಪಂಚಾಯಿತಿಗಳ ಮುಖಾಂತರ ಕಾನೂನಿನ ಚೌಕಟ್ಟಿನಲ್ಲಿ ಸಿಗಬೇಕಾದ ಮೂಲ ಭೂತ ಸೌಲಭ್ಯಗಳನ್ನು ಪಡೆಯಲು ತಾಲ್ಲೂಕು ಮಟ್ಟದಲ್ಲಿ ಜನಜಾಗೃತಿ ಸಮಾವೇಶ ನಡೆಸಲಾಗುತ್ತಿದೆ~ ಎಂದು ವಿವರಿಸಿದರು.

ವಿಶ್ವಕರ್ಮ ಜಗದ್ಗುರು ಸುಜ್ಞಾನ ಪ್ರಭು ಪೀಠದ ಗುರುಶಿವಾ ಸುಜ್ಞಾನ ಮೂರ್ತಿ ಮಹಾಸ್ವಾಮಿ  ಆಶೀರ್ವಚನ ನೀಡಿದರು.  ಹುಲಿಯೂರು ದುರ್ಗ ಕಾಳಿಕಾಂಬ ದೇವಾಲಯದ ಪೀಠಾಧ್ಯಕ್ಷ  ಕರುಣಾಕರ ಮಹಾಸ್ವಾಮಿ, ಚಿಕ್ಕಲೂರು ಕ್ಷೇತ್ರದ  ಸಿದ್ದಪ್ಪಾಜಿ ಮಠದ  ಸಿದ್ದನಾಗಲಿಂಗ ಮಹಾಸ್ವಾಮೀಜಿ, ಮರಳೇಗವಿ ಮಠದ  ಶಿವರುದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.