ADVERTISEMENT

ವೆಂಕಟೇಶ್ವರ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಕುಷ್ಟಗಿ: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ನ.19ರಂದು ಪ್ರತಿಷ್ಠಾಪನೆಗೊಳ್ಳಲಿರುವ ವೆಂಕಟೇಶ್ವರ ಮೂರ್ತಿ ಮತ್ತು ಗೋಪುರ ಕಳಶದ ಮೆರವಣಿಗೆ ಶುಕ್ರವಾರ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.

ಶಾಖಾಪೂರ ರಸ್ತೆಯಲ್ಲಿನ ಈಶ್ವರ ದೇವಸ್ಥಾನದ ಬಳಿ ಮೂರ್ತಿ ಮತ್ತು ಕಳಶಕ್ಕೆ ವಿಶೇಷ ಪೂಜೆ ನೆರವೇರಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಅಂಬೇಡ್ಕರ್ ನಗರಕ್ಕೆ ಕೊಂಡೊಯ್ಯಲಾಯಿತು. ಕುಂಭ, ಕಲಶ ಹಿಡಿದ ಮಹಿಳೆಯರನ್ನು ಒಳಗೊಂಡ ಆಕರ್ಷಕ ಮೆರವಣಿಗೆಯಲ್ಲಿ ಪ್ರಮುಖರು, ಡೊಳ್ಳು, ಕರಡಿ ಮಜಲು ವಾದನ ವಿವಿಧ ಕಲಾ ಮೇಳದವರು ಪಾಲ್ಗೊಂಡು ಕಳೆ ತಂದರು. ನಂತರ ವೆಂಕಟೇಶ್ವರ ಮೂರ್ತಿಯನ್ನು ಪುಷ್ಪವಾಸದಲ್ಲಿ ಇರಿಸಲಾಯಿತು.

ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನಮಂತಪ್ಪ ಕಟ್ಟಿಮನಿ, ಶುಕರಾಜ ತಾಳಕೇರಿ, ನಾಗರಾಜ ಮೇಲಿನಮನಿ, ಚಿದಾನಂದ ಇಂಡಿ, ಕಟ್ಟೆಪ್ಪ ಹಿರೇಮನಿ, ಕೃಷ್ಣಮೂರ್ತಿ ಟೆಂಗುಂಟಿ, ಬಾಳಪ್ಪ ಬೇವಿನಕಟ್ಟಿ, ವೆಂಕಟೇಶ ಕಟ್ಟಿಮನಿ, ಶರಣಪ್ಪ ಬೋದೂರು, ದುರುಗಪ್ಪ ಹಿರೇಮನಿ ಮತ್ತಿತರರು ಭಾಗವಹಿಸಿದ್ದರು.

ಮೂರು ದಿನಗಳಿಂದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಗದ್ದುಗೆ ನಿರ್ಮಾಣ, ದೇವರ ಗದ್ದುಗೆಗೆ ಪೂಜೆ ನೆರವೇರಿತು.
 
ಶನಿವಾರ ವೆಂಕಟೇಶ್ವರ ಮೂರ್ತಿಯ ಧ್ಯಾನವಾಸ, ಭಾನುವಾರ ಜಲವಾಸ ಮತ್ತು ಹುಬ್ಬಳ್ಳಿ ಅರ್ಚಕರಿಂದ ಭೂತೋಚ್ಚಾಟನೆ, ಸೋಮವಾರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾರೋಹಣ ನೆರವೇರಲಿದೆ. ಧರ್ಮದರ್ಶಿಗಳಿಗೆ ಸನ್ಮಾನ, ಅಭಿನಂದನೆ, ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ನಡೆಯುವವು ಎಂದು ವೆಂಕಟೇಶ್ವರ ದೇವಸ್ಥಾನ ಸಮಿತಿ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.