ADVERTISEMENT

ವೇತನಕ್ಕಾಗಿ ದಿನಗೂಲಿ ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಕೋಲಾರ: ಮೂರು ತಿಂಗಳ ವೇತನ ನೀಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಸಭೆ ಆವರಣದಲ್ಲಿ ದಿನಗೂಲಿ ನೌಕರರು ಸೋಮವಾರ ಧರಣಿ ನಡೆಸಿದರು.

ಮೂರು ತಿಂಗಳಿಂದ ವೇತನ ನೀಡಿಲ್ಲ. ಕೆಲಸವನ್ನೂ ನೀಡಿಲ್ಲ. ಬೇಡಿಕೆ ಮೇರೆಗೆ ಒಂದು ತಿಂಗಳ ಕಾಲ ಮಾತ್ರ ಕೆಲಸ ನೀಡಿ ಮತ್ತೆ ನಗರಸಭೆಯು ದಿನಗೂಲಿಗಳನ್ನು ಅಂತಂತ್ರಗೊಳಿಸಿದೆ. ಪಿಎಫ್ ಹಣವನ್ನೂ ಪಾವತಿಸಿಲ್ಲ ಎಂದು ದೂರಿದರು.

ವೇತನ ಪಡೆಯಲು ಬ್ಯಾಂಕ್ ಖಾತೆ ತೆರೆಯಬೇಕು ಎಂಬ ನಗರಸಭೆ ಸೂಚನೆ ಮೇರೆಗೆ ತಲಾ ಐನೂರು ರೂಪಾಯಿ ಖರ್ಚು ಮಾಡಿ ಖಾತೆ ತೆರೆಯಲಾಗಿದೆ. ಆದರೆ ನಗರಸಭೆ ವೇತನವನ್ನೇ ನೀಡಿಲ್ಲ. ಈಗ ಕೆಲಸವೂ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುರುಷ ದಿನಗೂಲಿಗಳು ಅಧ್ಯಕ್ಷೆ ನಾಜಿಯಾ ಕೊಠಡಿಗೆ ತೆರಳಿ ಅವರೊಡನೆ ವಾಗ್ವಾದಕ್ಕೆ ಇಳಿದರು. ಕೆಲಸ ಕೊಡುವುದಾಗಿ ನೀಡಿದ ಭರವಸೆ ಮರೆತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಹಿಳಾ ದಿನಗೂಲಿಗಳು ನಗರಸಭೆ ಹೊರ ಆವರಣದಲ್ಲಿ ಧರಣಿ ಮುಂದುವರಿಸಿದ್ದರು.

ಆಯುಕ್ತರು ರಜೆ ಮೇಲೆ ತೆರಳಿದ್ದಾರೆ. ಪ್ರಭಾರ ಆಯುಕ್ತರಾಗಿರುವ ಉಪವಿಭಾಗಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಉಪ ಚುನಾವಣೆ ಜವಾಬ್ದಾರಿ ಹೊತ್ತಿರುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಾಜಿಯಾ ಭರವಸೆ ನೀಡಿದರು. ನಂತರ ಧರಣಿ ಕೊನೆಗೊಂಡಿತು. ಮುಖಂಡರಾದ ಸೀನಪ್ಪ, ಪಾಂಡುರಂಗ, ಮುನಿಶಾಮಪ್ಪ, ಮಂಜುನಾಥ, ರಾಜೇಶ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.