ADVERTISEMENT

ಶಟಲ್ ಬ್ಯಾಡ್ಮಿಂಟನ್ ಪಂದ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ರಾಯಚೂರು: ಶಟಲ್ ಬ್ಯಾಡ್ಮಿಂಟನ್ ಆಟಗಾರರನ್ನು ಪ್ರೋತ್ಸಾಹಿಸುವ ದಿಶೆಯಲ್ಲಿ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಈ ಜಿಲ್ಲೆಯ ಫ್ರೆಂಡ್ಸ್ ಶಟಲ್ ಬ್ಯಾಡ್ಮಿಂಟನ್ ತಂಡವು ಆಯೋಜಿಸುವ ಮೂಲಕ ಕ್ರೀಡೆ ಬಗ್ಗೆ ಹೊಂದಿರುವ ತನ್ನ ಕಾಳಜಿಯನ್ನು ಮೆರೆದಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್.  ಶಂಕರಪ್ಪ ವಕೀಲ ಹೇಳಿದರು.

ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಫ್ರೆಂಡ್ಸ್ ಶಟಲ್ ಬ್ಯಾಡ್ಮಿಂಟನ್ ತಂಡವು ಆಯೋಜಿಸಿದ  ರಾಜ್ಯ ಮಟ್ಟದ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ-2012ನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಮಾತನಾಡಿ, ರಾಜ್ಯದ ವಿವಿಧ ಕಡೆಯಿಂದ ಆಗಮಿಸಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವುದು ಸಂತೋಷಕರ ಸಂಗತಿ. ಇದೇ ರೀತಿ ಪಂದ್ಯಾವಳಿ ಪ್ರತಿ ವರ್ಷ ನಡೆಸಿದರೆ ಜಿಲ್ಲಾಡಳಿತ ಸೂಕ್ತ ಸಹಕಾರ ನೀಡಲಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಯ್ಯದ್ ಯಾಸಿನ್ ಮಾತನಾಡಿ, ಕ್ರೀಡಾ ಚಟುವಟಿಕೆಯಲ್ಲಿ ಈ ಭಾಗದ ಯುವ ಸಮುದಾಯ ಸರ್ವ ಕಾಲಕ್ಕೂ ಪ್ರತಿಭೆ ಮೆರೆಯುತ್ತಲೇ ಬಂದಿದ್ದಾರೆ. ಮುಂಬರುವ ದಿನಗಳಲ್ಲಿ ಸುಮಾರು 10 ಕೋಟಿ ಮೊತ್ತದಲ್ಲಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ತನ್ವೀರಾ  ಬಷಿರುದ್ದೀನ್, ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ, ದೈಹಿಕ ಶಿಕ್ಷಣ ನಿವೃತ್ತ ನಿರ್ದೇಶಕ ಕೆ ತಿಪ್ಪನಗೌಡ ಅತಿಥಿಯಾಗಿದ್ದರು. ಫ್ರೆಂಡ್ಸ್ ತಂಡದ ಅಧ್ಯಕ್ಷ ಮಧು ನಿಮ್ಮಲಪೂಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.