ADVERTISEMENT

ಶಿವಮೊಗ್ಗ ಬಂದ್ ನೀರಸ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನದ ಹಿನ್ನೆಲೆಯಲ್ಲಿ ಅಭಿಮಾನಿಗಳ ಹೆಸರಿನಲ್ಲಿ ಬುಧವಾರ ಕರೆ ನೀಡಿದ್ದ ಸ್ವಯಂ ಪ್ರೇರಿತ ನಗರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿನೋಬನಗರದ ಯಡಿಯೂರಪ್ಪ ಮನೆಯ ಸುತ್ತಮುತ್ತಲಿನ ಭಾಗಗಳು, ಸವಳಂಗ ರಸ್ತೆ, ಶಿವಪ್ಪನಾಯಕ ವೃತ್ತ, ಗಾಂಧಿಬಜಾರ್, ಅಮಿರ್ ಅಹಮದ್ ವೃತ್ತದ ಕೆಲ ಅಂಗಡಿ-ಮುಂಗಟ್ಟುಗಳು ಬೆಳಿಗ್ಗೆ ಕೆಲಕಾಲ ಮುಚ್ಚಿದ್ದವು.

ಆದರೆ, ಬಿ.ಎಚ್. ರಸ್ತೆ, ಎನ್.ಟಿ. ರಸ್ತೆ, ಗೋಪಿ ವೃತ್ತ, ಮಹಾವೀರ ರಸ್ತೆಗಳಲ್ಲಿ ಎಂದಿನಂತೆ ಜನದಟ್ಟಣೆ ಇತ್ತು. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ಆದರೆ, ನಗರಸಾರಿಗೆ ಬಸ್‌ಗಳು ಬೆಳಿಗ್ಗೆ ಒಂದೆರಡು ಗಂಟೆ ಸೇವೆ ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಪರದಾಡಬೇಕಾಯಿತು.

ಚಿತ್ರಮಂದಿರಗಳು ಮುಚ್ಚಿದ್ದವು. ಕಾಲೇಜು ತರಗತಿಗಳು ನಡೆದವು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯಿತು. ಹೋಟೆಲ್‌ಗಳು ಒಂದೆರಡು ಗಂಟೆ ಕಾಲ ಅಲ್ಲಲ್ಲಿ ಮುಚ್ಚಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.