ಅರಕಲಗೂಡು: ಶುಂಠಿ, ಅರಿಶಿನ ದಂತಹ ಸಾಂಬಾರು ಬೆಳೆಗಳಿಗೆ ಅಂತರರಾಷ್ಟ್ರೀಯವಾಗಿ ಹೆಚ್ಚಿನ ಬೇಡಿಕೆ ಇದ್ದು ರೈತರು ಇದನ್ನು ವೈಜ್ಞಾನಿಕವಾಗಿ ಬೆಳೆದಾಗ ಹೆಚ್ಚಿನ ಇಳುವರಿ ಮತ್ತು ಆದಾಯ ಪಡೆಯಬಹುದಾಗಿದೆ ಎಂದು ಸಕಲೇಶಪುರ ಎಲಕ್ಕಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಬಿ.ಎ. ವಾದಿರಾಜ್ ತಿಳಿಸಿದರು.
ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಭಾನುವಾರ ಪೊಟ್ಯಾಟೊ ಕ್ಲಬ್ ಏರ್ಪಡಿಸಿದ್ದ ಅರಿಶಿನ ಮತ್ತು ಶುಂಠಿ ಬೆಳೆ ಬೇಸಾಯ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.
ಶುಂಠಿ ಬೆಳೆಯಲು ಸ್ಥಳೀಯವಾಗಿ ದೊರೆಯುವ ಬಿತ್ತನೆ ಬೀಜ ಬಳಸಿದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿಲ್ಲ. ಕಲ್ಲಿಕೋಟೆಯಲ್ಲಿರುವ ಸಂಬಾರು ಮಂಡಳಿಯ ಕೇಂದ್ರ ಕಚೇರಿಯಲ್ಲಿ ಶುಂಠಿ ಬಿತ್ತನೆ ಬೀಜ ದೊರೆಯುತ್ತಿದ್ದು, ಇದನ್ನು ತರಿಸಿಕೊಂಡು ಬಿತ್ತನೆ ನಡೆಸುವಂತೆ ಸಲಹೆ ಮಾಡಿದರು.
ಪೊಟ್ಯಾಟೊ ಕ್ಲಬ್ ಅಧ್ಯಕ್ಷ ಎಚ್. ಯೋಗಾರಮೇಶ್ ಮಾತನಾಡಿದರು. ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುತ್ತಿಗೆ ರಾಜೇಗೌಡ ಮಾತನಾಡಿ ಬ್ಯಾಂಕ್ ರೈತರಿಗೆ ನೀಡುತ್ತಿರುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಕೃಷಿ ವಿಜ್ಞಾನಿ ಅರುಣಕುಮಾರ್, ಪ್ರಗತಿಪರ ಶುಂಠಿ ಬೆಳೆಗಾರ ಪ್ರಕಾಶ್ ಮಾತನಾಡಿದರು. ತಾ.ಪಂ. ಸದಸ್ಯೆ ಸರೋಜಮ್ಮ ಮಲ್ಲಿಪಟ್ಟಣ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕ್ಲಬ್ ಮುಖಂಡರಾದ ಆಲದಹಳ್ಳಿ ಸುಬ್ಬೇಗೌಡ, ಎಂ.ಸಿ. ರಾಜೇಂದ್ರ, ಉದಯಕುಮಾರ್ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.