ADVERTISEMENT

ಶ್ರೀರಂಗಪಟ್ಟಣ: ಧ್ವನಿ- ಬೆಳಕು ಮತ್ತಷ್ಟು ವಿಳಂಬ!

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನ್ ಅವರ ದ್ವಿಶತಮಾನೋತ್ಸವ ಆಚರಣೆ ಅಂಗವಾಗಿ ಪಟ್ಟಣದಲ್ಲಿ ನಡೆಯಬೇಕಿದ್ದ ಧ್ವನಿ- ಬೆಳಕು ಕಾರ್ಯಕ್ರಮ ಮತ್ತಷ್ಟು ತಡವಾಗುವ ಸಾಧ್ಯತೆಗಳಿವೆ.

ಪಟ್ಟಣದ ಮೈಸೂರು ಗೇಟ್ ಬಳಿ, ಮೂರೂವರೆ ಎಕರೆ ವಿಸ್ತೀರ್ಣದಲ್ಲಿ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಕಳೆದ ಒಂದು ವರ್ಷದಿಂದ ಈ ಕಾರ್ಯಕ್ರಮ ಕುರಿತು ಚರ್ಚೆಗಳು ಮಾತ್ರ ನಡೆಯುತ್ತಿವೆ.

ಆದರೆ ಧ್ವನಿ- ಬೆಳಕು ಕುರಿತ ಮಹತ್ವದ ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಸ್ಕೃಿಪ್ಟ್ ಕೂಡ ಸಿದ್ಧಗೊಂಡಿಲ್ಲ. ಪುರಾತತ್ವ ಇಲಾಖೆ ಸದ್ಯ 20 ಗುಂಟೆಯಷ್ಟು ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿದೆ.

ಉಳಿದ ಜಮೀನು ಹಸ್ತಾಂತರ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀಧರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕಾಗಿ ರೂ.3.45 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ. ಸಿದ್ಧತಾ ಕಾರ್ಯಗಳಿಗಾಗಿ ಇ-ಟೆಂಡರ್ ಕರೆಯಲಾಗಿದೆ. ಈ ತಿಂಗಳ 23ರ ನಂತರ ಬಿಡ್ ನಡೆಸಲಾಗುತ್ತದೆ. ಈಗ ವಾಹನ ಪಾರ್ಕಿಂಗ್ ಇತರ ಉದ್ದೇಶಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
 
ಸ್ಮಾರಕಗಳ ಜತೆಗೆ ಹಂಪಿಯಲ್ಲಿ ರೂಪಿಸಿದ್ದ ಮಾದರಿಯಲ್ಲಿ ಕೃತಕ ವೇದಿಕೆ ನಿರ್ಮಾಣವಾಗಲಿದೆ. ಅಧಿಕೃತ ಸ್ಕೃಿಪ್ಟ್ ಸಿದ್ದಗೊಂಡ ಬಳಿಕ ಅಧಿಕೃತ ದಿನಾಂಕವೂ ಗೊತ್ತಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.