ರಾಯಚೂರು: ಶ್ರೀಶೈಲ ಯಾತ್ರೆ ಮುಗಿಸಿಕೊಂಡು ಬರುವ ಭಕ್ತಾದಿಗಳಿಗೆ ಇಲ್ಲಿನ ಭಗವತ್ ಭಕ್ತ ಮಂಡಳಿ ವತಿಯಿಂದ ಮಂಗಳವಾರ ಅನ್ನದಾಸೋಹ ಹಾಗೂ ಉಚಿತ ವೈದ್ಯಕೀಯ ತಪಾಸಣೆ ಆಯೋಜಿಸಲಾಗಿತ್ತು.
ಕಳೆದ 8 ವರ್ಷದಿಂದ ಈ ರೀತಿ ಅನ್ನದಾಸೋಹ ಮತ್ತು ಉಚಿತ ವೈದ್ಯಕೀಯ ತಪಾಸಣೆ ಸೇವೆ ಮಾಡುತ್ತಿದ್ದು, ಈ ವರ್ಷ ಇಲ್ಲಿನ ಬಸವೇಶ್ವರ ವೃತ್ತದ ಹತ್ತಿರ ಇರುವ ವಾಲ್ಕಾರ್ಟ್ ಮೈದಾನದಲ್ಲಿ ಈ ವ್ಯವಸ್ಥೆ ಮಾಡಿತ್ತು. 20 ಸಾವಿರಕ್ಕೂ ಭಕ್ತರು ಅನ್ನದಾಸೋಹದಲ್ಲಿ ಪಾಲ್ಗೊಂಡಿದ್ದರು.
ಬಿಜಾಪುರ, ಬಾಗಲಕೋಟ, ಗುಲ್ಬರ್ಗ, ಸೋಲಾಪುರ ಹೀಗೆ ಹಲವಾರು ಕಡೆಯಿಂದ ರಾಯಚೂರು ಮಾರ್ಗವಾಗಿ ಸಾವಿರಾರು ಭಕ್ತರು ಶ್ರೀಶೈಲಕ್ಕೆ ತೆರಳುತ್ತಾರೆ. ಯಾತ್ರೆ ಮುಗಿಸಿಕೊಂಡು ಬರುವಾಗ ಈ ಭಕ್ತರಿಗೆ ಇಂಥ ವ್ಯವಸ್ಥೆ ಕಾಣುವುದು ಅಪರೂಪ. ದಾನಿಗಳಾದ ಸದಾನಂದ ಪ್ರಭು ಮತ್ತು ಸಹೋದರರು ಈ ದಾಸೋಹ ವ್ಯವಸ್ಥೆ ಮಾಡಿದ್ದರು.
ಮಂಗಳವಾರ ಬೆಳಿಗ್ಗೆ ಕಿಲ್ಲೆ ಬೃಹ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಉದ್ಘಾಟಿಸಿದರು. ನಗರಸಭೆ ಸದಸ್ಯರಾದ ಜೆ ಶಿವಮೂರ್ತಿ, ಜಯಣ್ಣ, ಸುಭಾಷ, ಕೆ.ಸಿ ಕೃಷ್ಣಮೂರ್ತಿ, ಡಿ.ಆರ್ ನಾರಾಯಣ, ಭಾಸ್ಕರಶೆಟ್ಟಿ, ಡಾ.ನರಸಿಂಹಮೂರ್ತಿ, ಸುಧೀರ ಮತ್ತಿತರರಿದ್ದರು.
ಭಾರತ ವಿಕಾಸ ಪರಿಷತ್ ಸದಸ್ಯರು, ಎಸ್ಆರ್ಕೆ ಕಾಲೇಜಿನ ಪ್ರಾಚಾರ್ಯ ಡಾ.ನರಸಿಂಹಮೂರ್ತಿ ಮತ್ತು ಉಪನ್ಯಾಸಕರು, ಶಿಕ್ಷಣಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ಡಾ.ಆನಂದ ಫಡ್ನೀಸ್, ಡಾ.ಕಿರಣ್, ಡಾ.ಮಲ್ಲಿಕಾರ್ಜುನ, ಡಾ.ಹರಿಶ್ಚಂದ್ರರೆಡ್ಡಿ ಅವರು ಉಚಿತ ವೈದ್ಯಕೀಯ ಸೇವೆ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.