ADVERTISEMENT

ಷಡ್ಯಂತ್ರದಿಂದ ರಾಮುಲುಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ಗಂಗಾವತಿ: ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರ ಆಂತರಿಕ ಕಚ್ಚಾಟ ಮತ್ತು ರಾಜಕೀಯ ಷಡ್ಯಂತ್ರಕ್ಕೆ ಶ್ರೀರಾಮುಲು ಬಲಿಯಾಗಬೇಕಾಯಿತು ಎಂದು ಬಳ್ಳಾರಿಯ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ವಿಷಾದ ವ್ಯಕ್ತಪಡಿಸಿದರು.

ಬಿ.ಎಸ್.ಆರ್. ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಹಮ್ಮಿಕೊಂಡಿರುವ ಬೀದರ್‌ನಿಂದ ಬೆಂಗಳೂರು ವರೆಗಿನ ಪಾದಯಾತ್ರೆಯು ಗುರುವಾರ ನಗರಕ್ಕೆ ಆಗಮಿಸಿದಾಗ ಮಹಾತ್ಮಗಾಂಧಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಲೋಕಾಯುಕ್ತರು ಸಲ್ಲಿಸಿದ ಗಣಿ ವರದಿಯಲ್ಲಿ ಬಿ. ಶ್ರೀರಾಮುಲು ಅವರನ್ನು ರಾಜಕೀಯ ಪ್ರೇರಿತವಾಗಿ ಸೇರಿಸಲಾಗಿತ್ತು. ಆದರೆ ಯಾವ ತಪ್ಪನ್ನು ಮಾಡದ ಜನಸೇವಕ ಶ್ರೀರಾಮುಲು ಸಾರ್ವಜನಿಕವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆದಿತ್ತು.
 
ಆರೋಪದಿಂದ ಮುಕ್ತನಾಗುವ ಉದ್ದೇಶಕ್ಕೆ ಸಚಿವ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬಂದರು. ಇದೀಗ ಜನರತ್ತ ತೆರಳಿ ಜನಾದೇಶ ಪಡೆಯಲು ಶ್ರೀರಾಮುಲು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದರು.  ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮಾತನಾಡಿ, ಸಾರ್ವಜನಿಕರು, ನಾಡಿನ ರೈತ, ಬಡವ, ಕೂಲಿ ಕಾರ್ಮಿಕ, ಮಹಿಳೆಯರ ಸಮಸ್ಯೆ ಅರಿಯಲು ರಾಮುಲು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದರ ಹಿಂದೆ ರಾಮುಲು ಅವರ ಯಾವ ಸ್ವಾರ್ಥವೂ ಇಲ್ಲ ಎಂದರು.

~ನನ್ನ ಅವಧಿಯಲ್ಲಿ ವೇಗ ಪಡೆದುಕೊಂಡಿದ್ದ ಮುನಿರಾಬಾದ್-ಮಹೆಬೂಬನಗರ ರೈಲ್ವೆ ಕಾಮಗಾರಿಗೆ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಈ ಭಾಗದ ಸಂಸದರ ನಿರ್ಲಕ್ಷ್ಯವೇ ಕಾರಣ~ ಎಂದು ದೂರಿದರು. ಮುಖಂಡ ಮಹಿಪಾಲ ರೆಡ್ಡಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.