ADVERTISEMENT

ಸಂಭ್ರಮದ ಬಕ್ರೀದ್; ಸಾಮೂಹಿಕ ಪ್ರಾಥನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2011, 19:30 IST
Last Updated 7 ನವೆಂಬರ್ 2011, 19:30 IST
ಸಂಭ್ರಮದ ಬಕ್ರೀದ್; ಸಾಮೂಹಿಕ ಪ್ರಾಥನೆ
ಸಂಭ್ರಮದ ಬಕ್ರೀದ್; ಸಾಮೂಹಿಕ ಪ್ರಾಥನೆ   

ಮಾಗಡಿ: ಪಟ್ಟಣದ ಬಿ.ಕೆ. ರಸ್ತೆಯಲ್ಲಿ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
 
ಪಟ್ಟಣದ ಹೊಸಪೇಟೆ, ಹೊಂಬಾಳಮ್ಮನಪೇಟೆ, ಹಳೇ ಮಸೀದಿಮೊಹಲ್ಲಾ, ಹೊಸಮಸೀದಿ ಮೊಹಲ್ಲಾ ಗಳಿಂದ ಮೆರವಣಿಗೆಯಲ್ಲಿ ತೆರಳಿದರು. ರಂಗುರಂಗಿನ ವೇಷಭೂಷಣಗಳನ್ನು ಧರಿಸಿದ್ದ ಪುಟಾಣಿ ಮಕ್ಕಳು ಪ್ರಾರ್ಥನೆಯಲ್ಲಿ ಭಾಗವಹಿಸಿ ಗಮನ ಸೆಳೆದವು.

ತಾಲ್ಲೂಕಿನ  ಗ್ರಾಮೀಣ ಭಾಗದಲ್ಲಿ ನೆಲಸಿ ವ್ಯವಸಾಯ ಮಾಡುತ್ತಿರುವ ಮುಸ್ಲಿಂ ಬಾಂಧವರು ಅಗಲಕೋಟೆ, ಜಮಾಲ್ ಪಾಳ್ಯ, ಹೊಸಪಾಳ್ಯ, ಕಪಿನಿ ಪಾಳ್ಯ, ಹೊಸಲಾಯ, ಹಳೆಲಾಯ, ಬಿಸ್ಕೂರು, ಹುಳ್ಳೇನಹಳ್ಳಿ, ಮುತ್ತುಸಾಗರ, ಕುದೂರು, ಸೋಲೂರು, ಗುಡೇಮಾರನಹಳ್ಳಿ, ಮಾರೇನಗೌಡನದೊಡ್ಡಿ, ತೊರೆರಾಮನಹಳ್ಳಿ, ಮಾಡ್‌ಬಾಳ್ ಇತರೆಡೆಗಳಲ್ಲಿ ಇರುವ ಈದ್ಗಾಗಳಿಗೆ ತೆರಳಿ ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ಸ್ವಯಂ ಸೇವೆ: ಬಕ್ರೀದ್ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟಣೆಯ ಅಧ್ಯಕ್ಷ ಅನ್ಸರ್‌ಪಾಷಾ, ಕಾರ್ಯದರ್ಶಿ ಜಮೀರ್ ಪಾಷಾ. ಇಮ್ರಾನ ಪಾಷಾ, ಅಪ್ಜಲ್ ಪಾಷಾ ಇತರರು ಈದ್ಗಾಮೈದಾನದಲ್ಲಿ ಕುಡಿಯುವ ನೀರು ಒದಗಿಸಿ,ವಾಹನಗಳ ನಿಲ್ದಾಣಕ್ಕೆ ವ್ಯವಸ್ಥೆ ಮಾಡುವುದರ ಮೂಲಕ ಸೇವೆ ಸಲ್ಲಿಸಿದರು.

ಬಿಸ್ಕೂರು ವರದಿ: ಮುಸ್ಲಿಂ ಬಾಂಧವರು ಆಚರಿಸುವ ಎರಡು ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಅತ್ಯಂತ ಪವಿತ್ರವಾದ  ದೊಡ್ಡ  ಹಬ್ಬ. ತ್ಯಾಗ ಭಕ್ತಿಯ ನೆನಪು ಎಂದು ಮೌಲ್ವಿ ಅಬ್ದುಲ್ ರೆಹಮಾನ್ ತಿಳಿಸಿದರು.
ಅರಬ್ಬಿ ಭಾಷೆಯಲ್ಲಿ ಈದ್-ಉಲ್- ಅಝಾ, ಈದ್-ಉಲ್-ಝಹಾ, ಈದುಲ್-ಅಜ್-ಹಾ ಎಂಬ ಹೆಸರುಗಳಿಂದ ಕರೆಯಲಾಗುತ್ತಿದೆ.

ಅರೇಬಿಕ್ ಕಾಲಮಾನದ 12ನೇ ತಿಂಗಳಾದ ಜಲ್ಹೇಜಾ ಅಥವಾ ಜಿಲ್ಲ-ಹಜಾ ತಿಂಗಳ ಹತ್ತನೇ ದಿನ ಬಕ್ರೀದ್ ಹಬ್ಬವನ್ನು ಪವಿತ್ರವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಮೌಲ್ವಿಗಳು ವಿವರಿಸಿದರು. ಈದುಲ್ ಅಝಾ ಅಥವಾ ಬಲಿದಾನದ ಹಬ್ಬ ಎಂಬ ಹೆಸರು ಸೂಚಿಸುವಂತೆ ಕಠಿಣ ಪರೀಕ್ಷೆ, ತ್ಯಾಗ ಮತ್ತು ಸಮರ್ಪಣೆಯ ಸ್ಮರಣೆಗಳನ್ನು ಜಾಗೃತಗೊಳಿಸುವ ಹಾಗೂ ಸಮರ್ಪಣಾ ಮನೋಭಾವ ಸಾರುವ ಆಚರಣೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.