ಮುಂಡಗೋಡ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸಮತಾ ಸೈನಿಕ ದಳದ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.
1980ರ ದಶಕದಿಂದ ಆಡಳಿತ ನಡೆಸುತ್ತಿರುವ ಸರ್ಕಾರಗಳು ಜಾತಿ, ಜನಸಂಖ್ಯಾವಾರು ಮೀಸಲಾತಿ ಹಂಚದೇ ನಿರ್ಲಕ್ಷ್ಯವನ್ನು ತೋರುತ್ತ ಬಂದಿವೆ. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ವಿವಿಧ ಜಾತಿ ಸಂಘಟನೆಗಳು ಅಸ್ಪೃಶ್ಯ ಜಾತಿಗಳ ಮೀಸಲಾತಿ ಹಂಚಿಕೆಯನ್ನು ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು. ಇದರ ಫಲವಾಗಿ ಸರ್ಕಾರವು ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿತ್ತು. ಅದರ ವರದಿ ಜಾರಿಯಿಂದ ಮೀಸಲಾತಿ ಅನ್ಯಾಯ ಸರಿಪಡಿಸಲು ಸಾಧ್ಯ ಎಂದು ತಿಳಿಸಿದರು.
ಸತತ ಆರು ವರ್ಷಗಳ ಕಾಲ ರಾಜ್ಯ ಸುತ್ತಾಡಿ ಮಾಹಿತಿ ಸಂಗ್ರಹಿಸಿದ ಆಯೋಗವು ಶೇ.15ರಷ್ಟು ಇರುವ ಪ.ಜಾತಿ ಮೀಸಲಾತಿಯನ್ನು ಶೇ.6ರಷ್ಟು ಮಾದಿಗ ಸಂಬಂಧಿಸಿದ ಜಾತಿಗಳಿಗೆ, ಶೇ.5ರಷ್ಟು ಹೊಲಿಯ ಜಾತಿಗೆ, ಶೇ.3ರಷ್ಟು ಸ್ಪರ್ಶ ಜಾತಿ, ಶೇ.1ರಷ್ಟು ಇತರೆ ವಂಚಿತ ಜಾತಿಗಳಿಗೆ ಮೀಸಲಾತಿ ಕಲ್ಪಿಸುವಂತೆ ಶಿಫಾರಸು ಮಾಡಿದೆ.
ಆದ್ದರಿಂದ ಸದಾಶಿವ ಆಯೋಗದ ವರದಿಯನ್ನು ಯಾವುದೇ ಬದಲಾವಣೆ ಮಾಡದೇ ಕೂಡಲೇ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಚಲವಾದಿ, ಉಪಾಧ್ಯಕ್ಷ ಪರಮೇಶ ಧಾರವಾಡ, ರಾಘವೇಂದ್ರ ಟಪಾಲದವರ, ಪರಶುರಾಮ ದೇವರಮನಿ, ಉಮೇಶ ಗುಡಿಗೇರಿ, ಯಲ್ಲಪ್ಪ ಚಲವಾದಿ, ಫಕ್ಕೀರಪ್ಪ ಚಲವಾದಿ, ಶ್ರೀನಿವಾಸ ದಾಸರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.