ಅರಸೀಕೆರೆ: ‘ಪಂಚಭೂತಗಳಂತೆ ಮನುಷ್ಯನು ಸಹ ನಿಸ್ವಾರ್ಥ ಸಮಾಜ ಸೇವೆ ಮಾಡಬೇಕು’ ಎಂದು ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಶನಿವಾರ ಹೇಳಿದರು.
ತಾಲ್ಲೂಕಿನ ಡಿ.ಎಂ.ಕುರ್ಕೆ ಬೂದಿಹಾಲ್ ವಿರಕ್ತ ಮಠದ ಆವರಣದಲ್ಲಿ ಆಯೋಜಿಸಿದ್ದ ಲಿಂ.ಗಂಗಮ್ಮ ಅವರ ಪುಣ್ಯ ಸಂಸ್ಮರಣೆ ಹಾಗೂ ಸರ್ವ ಶರಣ ಸಮ್ಮೇಳನದಲ್ಲಿ ಅವರು ಸಾನ್ನಿಧ್ಯ ವಹಿಸಿ ದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಹುಟ್ಟು-ಸಾವು ನಿಸರ್ಗದತ್ತ ಪ್ರಕ್ರಿಯೆ. ಈ ಜೀವನವನ್ನು ಸಮಾಜಮುಖಿಯಾಗಿ ಕಳೆಯುವವರೇ ಶ್ರೇಷ್ಠರೆನಿಸುತ್ತಾರೆ. ಇಂತಹವರು ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಮನುಷ್ಯ ಪರೋಪಕಾರಿಯಾಗಿ ಜೀವನ ನಡೆಸಿದರೆ ಬದುಕು ಸಾರ್ಥಕವಾಗುತ್ತದೆ’ ಎಂದರು.‘ಮನುಷ್ಯ ಮಾನವೀಯ ಮೌಲ್ಯಗಳಿಗೆ ಉನ್ನತ ಸ್ಥಾನ ನೀಡಬೇಕು. ಹುಟ್ಟಿದ್ದಕ್ಕಾಗಿ ಬದುಕಬೇಕು ಎಂಬ ಧೋರಣೆ ತೊರೆದು ಜೀವನದಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಳ್ಳಬೇಕು. ತಾನು ಉರಿದು ಮತ್ತೊಬ್ಬರಿಗೆ ಬೆಳಕು ನೀಡುವ ಜ್ಯೋತಿಯು ಕಲ್ಯಾಣದ ಸಂಕೇತ ಹಾಗೂ ಪ್ರಗತಿಯ ಪ್ರತೀಕ’ ಎಂದು ತಿಳಿಸಿದರು.
ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ದೊಡ್ಡಗುಣಿ ಹಾಗೂ ಗಂಡಸಿ ಶಂಭುಲಿಂಗೇಶ್ವರ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ, ಜಿ.ಪಂ ಸದಸ್ಯೆ ಪಾರ್ವತಮ್ಮ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ರಾಂಪುರ ನಿರ್ವಾಣ ಸಿದ್ದೇಶ್ವರ ಭಜನಾ ಸಂಘದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.