ADVERTISEMENT

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜನಸಾಗರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 17:00 IST
Last Updated 18 ಫೆಬ್ರುವರಿ 2011, 17:00 IST
ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜನಸಾಗರ
ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜನಸಾಗರ   

ಸವದತ್ತಿ: ಉತ್ತರ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಯಲ್ಲಮ್ಮನ ಗುಡ್ಡದಲ್ಲಿ ಲಕ್ಷಾಂತರ ಭಕ್ತರು ಶುಕ್ರವಾರ ಶ್ರದ್ಧೆ, ಭಕ್ತಿಯಿಂದ ’ಭಾರತ ಹುಣ್ಣಿಮೆ’ ಆಚರಿಸಿದರು. 
ಒಂದು ವಾರದಿಂದ ಭಕ್ತರು ಚಕ್ಕಡಿ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಮೂಲಕ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಇಡೀ ಗುಡ್ಡದಲ್ಲಿ ಕಣ್ಣಾಡಿಸಿದತ್ತ, ಜನರೇ ತುಂಬಿಕೊಂಡಿದ್ದಾರೆ. ಕೆಲವರು ಈಗಾಗಲೇ ಕಾಲ್ನಡಿಗೆಯ ಮೂಲಕ ಗುಡ್ಡ ತಲುಪಿದ್ದು, ಹಲವಾರು ಜನರು ಗುಡ್ಡ ತಲುಪುತ್ತಿದ್ದಾರೆ.

ಭಕ್ತರು ಅಲ್ಲಲ್ಲಿ ತಾವೇ ನಿರ್ಮಿಸಿಕೊಂಡ ತಾತ್ಕಾಲಿಕ ಶೆಡ್‌ಗಳಲ್ಲಿ ಬೀಡುಬಿಟ್ಟಿದ್ದು, ದೇವಿಗೆ ನೈವೇದ್ಯ ಮಾಡಲೆಂದು ಕರಿಗಡಬು ಹಾಗೂ ಅಡುಗೆ ತಯಾರಿಸುತ್ತಿದ್ದ ದೃಶ್ಯ ಗುಡ್ಡದಲ್ಲಿ ಎಲ್ಲೆಡೆ ಸಾಮಾನ್ಯವಾಗಿತ್ತು.

ಭಕ್ತರು (ರೇಣುಕಾ ಅಥವಾ ಯಲ್ಲಮ್ಮ) ದೇವಿಯ ದರ್ಶನಕ್ಕಾಗಿ ಪ್ರಾಂಗಣಕ್ಕೆ ಬರುವಾಗ ವಿವಿಧ ವಾದ್ಯಗಳೊಂದಿಗೆ ಭಂಡಾರ ಎರಚುತ್ತ, ಕುಣಿಯುತ್ತ ತಂಡೋಪ ತಂಡವಾಗಿ ಬಂದು ಕಾಯಿ, ಕರ್ಪೂರ ಹಾಗೂ ಭಕ್ತಿಯ ಕಾಣಿಕೆ ಸಮರ್ಪಿಸಿದರು. ನಂತರ ಮೀಸಲು ಅಡುಗೆಯಿಂದ ದೇವಿಯ ಉಡಿ ತುಂಬಿ ಸೇವೆ ಸಲ್ಲಿಸಿದರು.

ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ಒಟ್ಟು 23 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು, ಇಲ್ಲಿನ ಜೋಗುಳಭಾವಿಯಿಂದ ಯಲ್ಲಮ್ಮನಗುಡ್ಡದ ವರೆಗೆ ಜೋಡು ರಸ್ತೆ ನಿರ್ಮಾಣಕ್ಕಾಗಿ 1.56 ಕೋಟಿ ರೂ. ಮಂಜೂರಾಗಿದೆ, ಬರುವ ದಿನಗಳಲ್ಲಿ ಕಾಮಗಾರಿಗೆ ಚಾಲನೆ ದೊರಕಲಿದೆ ಎಂದು ಶಾಸಕ ಆನಂದ ಮಾಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.