ADVERTISEMENT

ಸಾಂಸ್ಕೃತಿಕ ಉತ್ಸವಕ್ಕೆ ಸಿಂಗಾರಗೊಂಡ ಆನೆಗೊಂದಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ಗಂಗಾವತಿ: ಮೂರು ವರ್ಷಗಳ ಬಳಿಕ ಆನೆಗೊಂದಿಯಲ್ಲಿ ಉತ್ಸವದ ಉತ್ಸಾಹ ಕಂಗೊಳಿಸುತ್ತಿದೆ. ಬುಧವಾರದಿಂದ ಎರಡು ದಿನ (ಮಾ 23 ಮತ್ತು 24) ನಡೆಯುವ ಆನೆಗೊಂದಿ ಉತ್ಸವಕ್ಕೆ ಇಡೀ ಗ್ರಾಮ ಮಧುವಣಗಿತ್ತಿಯಂತೆ ಸಿಂಗರಿಸಿಕೊಂಡಿದೆ.2007ರಲ್ಲಿ ಅದ್ದೂರಿಯಾಗಿ ನಡೆದಿದ್ದ ಆನೆಗೊಂದಿ ಉತ್ಸವ, 2008ರಲ್ಲಿ ರಾಜ್ಯಪಾಲರ ಆಡಳಿತದಲ್ಲಿ  ಸಾಂಕೇತಿಕವಾಗಿ ಆಚರಿಸಲಾಯಿತು.

ಹಣದ ಕೊರತೆ, 2009ರಲ್ಲಿ ಸೇತುವೆ ದುರಂತ, 2010ರಲ್ಲಿ ಅತಿವೃಷ್ಟಿ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಉತ್ಸವ ಮುಂದೂಡಲ್ಪಟ್ಟಿತ್ತು. ಆದ್ದರಿಂದ ಈ ಬಾರಿ ಉತ್ಸವ ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿದೆ. ಆನೆಗೊಂದಿ ಉತ್ಸವಕ್ಕೆ ಶಾಶ್ವತ ವೇದಿಕೆ ಇರಲಿ ಎಂಬ ಸದುದ್ದೇಶದಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ತಮ್ಮ ಅಧಿಕಾರಾವಧಿಯಲ್ಲಿ ತಳವಾರಘಟ್ಟಕ್ಕೆ ಹೋಗುವ ರಸ್ತೆಯ ಬದಿ ವೇದಿಕೆ ನಿರ್ಮಿಸಲು ಶ್ರಮಿಸಿದ್ದರು.
 

ವಿಶಾಲವಾದ ಶಾಶ್ವತ ವೇದಿಕೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಸುಮಾರು ರೂ 10 ಲಕ್ಷ ವೆಚ್ಚ ಮಾಡಿದೆ. ಆದರೆ ಈ ಸಾರಿಯ ಉತ್ಸವಕ್ಕಾಗಿ ಹಳೆಯ ವೇದಿಕೆ ನಾಶಪಡಿಸಿ ರೂ 14 ಲಕ್ಷ ವೆಚ್ಚದಲ್ಲಿ ಪರ್ಯಾಯ ವೇದಿಕೆ ಮಾಡಲಾಗಿದೆ.ಹಾಗೆಯೇ ಸರ್ಕಾರಿ ಶಾಲೆ ಆವರಣದ ರಂಗಮಂದಿರದಲ್ಲಿ ನಡೆಯುತ್ತಿದ್ದ ಉತ್ಸವದ ವೇದಿಕೆಯನ್ನು ಬದಲಿಸಿ, ಗಗನ ಮಹಲ್‌ನ ಆವರಣದಲ್ಲಿ ಹೊಸ ವೇದಿಕೆ ನಿರ್ಮಿಸಲಾಗಿದೆ. ಇದಕ್ಕೆ ರಾಣಿ ಕುಪ್ಪಮ್ಮದೇವಿ ಹೆಸರನ್ನು ನಾಮಕರಣ ಮಾಡಲಾಗಿದೆ.

ವೇದಿಕೆ ವಿನ್ಯಾಸ, ಅಲಂಕಾರ, ಸ್ವಾಗತ ಫಲಕ, ಕಮಾನು, ಆನೆ, ಕುದುರೆ ಮೊದಲಾದ ಮಾದರಿ, ವಿಶೇಷ ಧ್ವನಿ- ಬೆಳಕಿನ ವ್ಯವಸ್ಥೆಯೂ ಏರ್ಪಾಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT