ADVERTISEMENT

ಸಾಲ ಬಾಧೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಶಿರಾ: ಸಾಲ ಬಾಧೆ ಮತ್ತು ಸಾಕಿದ ಕುರಿಗಳ ಸಾವಿನಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಗೋವಿಂದನಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ತಾಲ್ಲೂಕಿನಲ್ಲಿ ಕಳೆದ ಹತ್ತು ದಿನಗಳಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಐದಕ್ಕೇರಿದೆ.

ಚಿಕ್ಕಲಿಂಗಪ್ಪ (45) ಕುರಿಹಟ್ಟಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರದಿಂದ ಶೇಂಗಾ ಬೆಳೆ ಕೈಕೊಟ್ಟಿದ್ದು, ಪಟ್ಟನಾಯಕನಹಳ್ಳಿ ಕೆನರಾ ಬ್ಯಾಂಕಿನಲ್ಲಿ ಮಾಡಿದ್ದ ರೂ. 50 ಸಾವಿರ ಬೆಳೆ ಸಾಲ ಹಾಗೂ ಸಾಕಿದ್ದ ಕುರಿಗಳ ಸತತ ಸಾವಿನಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಲಿಂಗಪ್ಪ ಅವರಿಗೆ 4 ಎಕರೆ ಜಮೀನು ಇದ್ದು, ಕಳೆದ ಆರು ತಿಂಗಳ ಹಿಂದಷ್ಟೇ ಬ್ಯಾಂಕಿನಲ್ಲಿ ರೂ. 50 ಸಾವಿರ ಬೆಳೆ ಸಾಲ ಪಡೆದು ಶೇಂಗಾ, ತೊಗರಿ ಬಿತ್ತನೆ ಮಾಡಿದ್ದರು.

ಆದರೆ ಮಳೆ ಕೈಕೊಟ್ಟು ಬೆಳೆ ನೆಲಕಚ್ಚಿತ್ತು. ಜೊತೆಗೆ ಸಾಕಿದ್ದ 50 ಕುರಿಗಳಿಗೆ ಬರದ ಹಿನ್ನೆಲೆಯಲ್ಲಿ ಮೇವು ಸಿಗದೆ ವಲಸೆ ಹೋಗಿದ್ದರು. ಅಲ್ಲಿ ಕುರಿಗಳು ರೋಗಕ್ಕೆ ತುತ್ತಾಗಿ ನಿತ್ಯ ಸಾವನ್ನಪ್ಪುತ್ತಿದ್ದವು. ಊರಿಗೆ ಹಿಂದಿರುಗಿದರೆ ಕುರಿಗಳ ಸಾವು ನಿಲ್ಲಬಹುದೆಂದು ಮರಳಿ ಗ್ರಾಮಕ್ಕೆ ಬಂದಿದ್ದರು. ಆದರೆ ಇಲ್ಲಿಯೂ ಕುರಿಗಳ ಸಾವು ನಿಲ್ಲಲಿಲ್ಲ. ಕಳೆದ ರಾತ್ರಿ ಕೂಡಾ ಒಂದು ಕುರಿ ಸತ್ತು ಹೋಗಿತ್ತು.

ಅಲ್ಲದೆ ಪತ್ನಿ ತಾಯಮ್ಮ  ಸಹ ಖಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು. ಬ್ಯಾಂಕ್ ಹಾಗೂ ಮತ್ತಿತರರ ಬಳಿ ಸುಮಾರು ರೂ. 2 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.