ADVERTISEMENT

ಸಾಹಿತ್ಯ- ಅಧ್ಯಾತ್ಮ ಸಮೀಕರಿಸಿದ ಕುವೆಂಪು: ಸಿರ್ಸೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬೀದರ್: ಸಾಹಿತ್ಯ ಮತ್ತು ಅಧ್ಯಾತ್ಮವನ್ನು ಸಮೀಕರಿಸಿದವರು ಕುವೆಂಪು ಎಂದು ಸಾಹಿತಿ ಡಾ. ಪ್ರೇಮಾ ಸಿರ್ಸೆ ನುಡಿದರು.

ಕುವೆಂಪು ಕನ್ನಡ ಸಂಘವು ನಗರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ಕವಿತೆಗಳಲ್ಲಿ ಬದುಕಿನ ಪರಿಪೂರ್ಣ ದರ್ಶನವನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಕುವೆಂಪು ನಾಡು ಕಂಡ ಮಹಾನ್ ಚೇತನ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಗಾಧವಾಗಿದೆ ಎಂದರು.

ಕುವೆಂಪು ಬಹುದೊಡ್ಡ ವಿಚಾರವಾದಿ ಆಗಿದ್ದರು ಎಂದು ಡಾ. ಬಸವರಾಜ ಬಲ್ಲೂರು ತಿಳಿಸಿದರು.

 `ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬನ್ನಿ, ಬಡತನವ ಕೀಳಬನ್ನಿ, ಮೌಢ್ಯತೆಯ ಮಾರಿಯನ್ನು ಹೊರದೂಡಲೈತನ್ನಿ, ವಿಜ್ಞಾನ ದೀವಿಗೆಯ ಹಿಡಿದು ಬನ್ನಿ~ ಎಂದು ಸಾರುವ ಮೂಲಕ ಸಾತ್ವಿಕ ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದ್ದರು ಎಂದರು.

ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಭ್ರಾತೃತ್ವ, ವಿಶ್ವಮಾನವ ಪ್ರಜ್ಞೆಯನ್ನು ಅವರು ಹೊಂದಿದ್ದರು. ಮನುಷ್ಯರ ಬಹುದೊಡ್ಡ ಸಂಪತ್ತು `ಮತಿ~. ಆದ್ದರಿಂದ ವಿದ್ಯಾರ್ಥಿಗಳು ನಿರಂಕುಶ ಮತಿಗಳಾಗಬೇಕು. ಯಾವುದನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂಬ ನಿಲುವು ಅವರದ್ದಾಗಿತ್ತು ಎಂದು ಹೇಳಿದರು.

ಸಾಹಿತ್ಯ ಬದುಕನ್ನು ಕಟ್ಟಿಕೊಡುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಬಿ.ಎಸ್. ಸಜ್ಜನ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ, ಸಂಸ್ಕೃತಿ ಸಮೃದ್ಧವಾಗಿರುವುದು ಹೆಮ್ಮೆಯ ಸಂಗತಿ ಆಗಿದೆ ಎಂದರು.

ಕುವೆಂಪು ಕನ್ನಡ ಸಂಘದ ಅಧ್ಯಕ್ಷ ಪಂಚಾಕ್ಷರಿ ಪುಣ್ಯಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸಿ.ಎಸ್. ಪಾಟೀಲ್, ಪ್ರೊ. ಶಿವಶರಣಪ್ಪ ಚಿಟ್ಟಾ, ಹಣಮಂತಪ್ಪ ಪಾಟೀಲ್ ಉಪಸ್ಥಿತರಿದ್ದರು. ಮಾನಶೆಟ್ಟಿ ಬೆಳಕಿರೆ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.