ಬೀದರ್: `ಈಶ್ವರಪ್ಪ ಅವರು ನಮ್ಮ ಪಕ್ಷದ ಅಧ್ಯಕ್ಷ, ಸದಾನಂದಗೌಡರು ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಅವರು ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ದೊಡ್ಡ ನಾಯಕ~ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ರಾಜನಾಥ್ಸಿಂಗ್ ಹೇಳಿದರು.
`ಈಗ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯ ಸರ್ಕಾರ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಸದ್ಯ ಅವರನ್ನು ಬದಲಾಯಿಸುವ ಪ್ರಶ್ನೆ ಉದ್ಭವಿಸಿಲ್ಲ~ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಇರುವ ಗೊಂದಲದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಸಲಹೆ ಏನು? ಎಂಬ ಪ್ರಶ್ನೆಗೆ `ಸಲಹೆ ಕೇಳಿದಾಗ ಮಾತ್ರ ನೀಡಲಾಗುತ್ತದೆ. ಕೇಳದೇ ಸಲಹೆ ನೀಡಲು ಬರುವುದಿಲ್ಲ~ ಎಂದು ಹೇಳಿದ ರಾಜನಾಥ್ಸಿಂಗ್ ಅವರು `ಇದುವರೆಗೆ ಯಾಕೆ ಸಲಹೆ ಕೇಳಿಲ್ಲ? ಸ್ನೇಹಿತರೇ~ ಎಂದು ತಮ್ಮ ಪಕ್ಕ ಕುಳಿತಿದ್ದ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಗೋವಿಂದ ಕಾರಜೋಳ ಅವರತ್ತ ನೋಡಿದರು. ಸಚಿವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ.
ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡುವ ಕುರಿತು ಕೇಳಲಾದ ಪ್ರಶ್ನೆಗೆ `ನೀಡಲು ನಮ್ಮ ಬಳಿ ಯಾವುದೇ ಸ್ಥಾನಮಾನ ಇಲ್ಲ~ ಎಂದು ಮುಗುಮ್ಮಾಗಿ ಹೇಳಿದರು.
`ಯಡಿಯೂರಪ್ಪ ಕೂಡ ನನ್ನ ಹಾಗೆ ಹಿರಿಯ ನಾಯಕರೇ ಇದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಸಮುದಾಯಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ಕೂಡ ಸರ್ಕಾರ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ~ ಎಂದು ಹೇಳಿದರು.
`ಸದಾನಂದಗೌಡರು ಸದ್ಯ ಮುಖ್ಯಮಂತ್ರಿ ಇದ್ದಾರೆ. ಪಾರ್ಟಿ ನಡೆಯುತ್ತಿದೆ. ನಿಂತಿಲ್ಲ ಮತ್ತು ಕುಳಿತಿಲ್ಲ. ಎಲ್ಲವೂ ಚೆನ್ನಾಗಿದೆ. ಬದಲಾವಣೆ ಮಾಡುವ ಪ್ರಶ್ನೆ ಎದುರಾಗಿಲ್ಲ. ಪ್ರಶ್ನೆ ಬಂದಾಗ ನೋಡಿದರಾಯಿತು. ಈಗೇಕೆ ಆ ಬಗ್ಗೆ ಚರ್ಚೆ?~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.