ADVERTISEMENT

ಸಿಡಿಲು-ಗುಡುಗು ಸಹಿತ ಮುಂಗಾರು ಮಳೆ ಆರ್ಭಟ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:45 IST
Last Updated 1 ಜೂನ್ 2011, 18:45 IST

ಬಳ್ಳಾರಿ: ಬುಧವಾರ ಮಧ್ಯಾಹ್ನ ಸಿಡಿಲು ಗುಡುಗಿನ ಅಬ್ಬರದ ನಡುವೆ ಭಾರಿ ಮಳೆ ಸುರಿಯಿತು. ಮಧ್ಯಾಹ್ನ 1.45ಕ್ಕೆ ಆರಂಭವಾದ ಮಳೆ 45 ನಿಮಿಷಗಳ ಕಾಲ ಸುರಿಯಿತು. ತೆಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆಯಾಯಿತು. ನಗರದಲ್ಲಿ ಒಟ್ಟು 30 ಮಿ.ಮೀ. ಮಳೆ ಸುರಿದಿರುವುದು ವರದಿಯಾಗಿದೆ.

ನಗರದ ಕೊಳೆಗೇರಿಗಳಲ್ಲಿರುವ ಗುಡಿಸಲುಗಳೊಳಗೆ ನೀರು ನುಗ್ಗಿ ನಿವಾಸಿಗಳು ತೀವ್ರ ಪರದಾಡಿದರೆ, ತಹಶೀಲ್ದಾರ್ ಕಚೇರಿಯ ಆವರಣ ಕೆಲ ಕಾಲ ಜಲಾವೃತ ಆಗಿದ್ದರಿಂದ ಕಚೇರಿ ಕೆಲಸಕ್ಕೆ ಆಗಮಿಸಿದ್ದ ಜನರು ಹೊರ ಹೋಗುವುದಕ್ಕೆ ಅಡಚಣೆ ಉಂಟಾಯಿತು.

ಮಳೆ ಸುರಿಯಿತೆಂದರೆ ಸಂಪೂರ್ಣ ಜಲಾವೃತವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟುಮಾಡುವ ಹಳೆ ಬಸ್ ನಿಲ್ದಾಣ, ಕನಿದುರ್ಗಮ್ಮ ರಸ್ತೆಯಲ್ಲಿನ ರೈಲ್ವೆ ಕೆಳ ಸೇತುವೆಯಲ್ಲಿ ವಾಹಗಳ ಸಂಚಾರಕ್ಕೆ ತೊಂದರೆಯಾಯಿತು.
ಅನೇಕ ವರ್ಷಗಳಿಂದ ಈ ತೊಂದರೆ ಇದ್ದರೂ ಸಂಬಂಧಿಸಿದರು ಸಮಸ್ಯೆಯ ಪರಿಹಾರೋಪಾಯ ಕಂಡುಕೊಳ್ಳದಿರುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗೆ ಈಡು ಮಾಡಿದೆ ಎಂದು ಅನೇಕರು ಗೊಣಗಿದರು.

 ಒಂದು ಗಂಟೆಗೂ ಅಧಿಕ ಕಾಲ ಸಿಡಿಲು ಗುಡುಗುಗಳ ಆರ್ಭಟದಿಂದಾಗಿ ಜನತೆ ಭಯಭೀತರಾದರು. ನಗರದ ಬಸವ ಭವನದ ಹಿಂಭಾಗದಲ್ಲಿರುವ ಗುಡಿಸಲೊಂದು ಸಿಡಿಲು ಬಡಿದು  ಅರ್ಧ ಭಾಗ ಸುಟ್ಟು ಕರಕಲಾಗಿದೆ.
 ಗುಡಿಸಲಿಲ್ಲಿ ಯಾರೂ ವಾಸವಿಲ್ಲದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿಕೊಂಡ ಬೆಂಕಿ ನಂತರ ಗುಡಿಸಲಿಗೂ ವ್ಯಾಪಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.