ದಾವಣಗೆರೆ: ಸುಸಜ್ಜಿತ ಗ್ರಾಮ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಒತ್ತು ನೀಡಲಾಗುವುದು ಎಂದು ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.ತಾಲ್ಲೂಕಿನ ಶಾಗಲೆ ಗ್ರಾಮದಲ್ಲಿ ಮಂಗಳವಾರ ಹೈಮಾಸ್ಟ್ ದೀಪ ಉದ್ಘಾಟನೆ ಹಾಗೂ ಕಾಂಕ್ರಿಟ್ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರ ಪ್ರಸಕ್ತ ವರ್ಷ 1,300 ಹಳ್ಳಿಗಳನ್ನು ಸುಸಜ್ಜಿತ ಗ್ರಾಮಗಳನ್ನಾಗಿ ರೂಪಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಅಡಿ ಶಾಗಲೆಯನ್ನೂ ಸೇರಿಸಲು ಪ್ರಯತ್ನಿಸಲಾಗುವುದು. ಊರಿನಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಸಾಕಷ್ಟು ಅರ್ಜಿಗಳು ಬಂದಿವೆ. ಗ್ರಾಮಸ್ಥರು ಸೂಕ್ತ ಸ್ಥಳ ತೋರಿಸಿದಲ್ಲಿ ಸರ್ಕಾರ ಜಮೀನು ಖರೀದಿಸಿ ಮನೆ ನಿರ್ಮಿಸಲು ಸಿದ್ಧವಿದೆ. ಉದ್ಯೋಗ ಖಾತ್ರಿ ಯೋಜನೆ ಮೂಲಕವೂ ಸಾಕಷ್ಟು ಕಾರ್ಯಕ್ರಮಗಳನ್ನು ಇಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆ ಅಡಿ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಶಿಮುಲ್ ನಿರ್ದೇಶಕ ಕೆ.ಎಚ್. ಪಾಲಾಕ್ಷಪ್ಪ ಮಾತನಾಡಿ, ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಸಚಿವರು, ಶಾಸಕರು ಸ್ಪಂದಿಸುತ್ತಿದ್ದಾರೆ. ಗ್ರಾಮದಲ್ಲಿ 500ರಿಂದ 600 ಲೀಟರ್ ಹಾಲು ಪ್ರತಿದಿನ ಉತ್ಪಾದನೆಯಾಗುತ್ತಿದೆ. ಇಲ್ಲಿಗೆ ಅತ್ಯಾಧುನಿಕ ಹಾಲು ಕರೆಯುವ ಯಂತ್ರ ಒದಗಿಸಲಾಗುವುದು ಎಂದರು. ಶಾಸಕ ಎಂ. ಬಸವರಾಜ ನಾಯ್ಕ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಸಹನಾ ರವಿ, ಬಿ. ಚಂದ್ರಶೇಖರಪ್ಪ, ಎಸ್. ಎಂ. ರುದ್ರಪ್ಪ, ಹಾಲಮ್ಮ ಡಿ.ಡಿ. ಹನುಮಂತಪ್ಪ, ಎಂ. ದೇವೇಂದ್ರಪ್ಪ, ಕೆ.ಆರ್. ಮಂಜುನಾಥ್ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.