ADVERTISEMENT

ಸೊರಬದಲ್ಲಿ ಸಮಾವೇಶ: ರೈತರ ಸಮಸ್ಯೆ ನಿವಾರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST
ಸೊರಬದಲ್ಲಿ ಸಮಾವೇಶ: ರೈತರ ಸಮಸ್ಯೆ ನಿವಾರಿಸಲು ಆಗ್ರಹ
ಸೊರಬದಲ್ಲಿ ಸಮಾವೇಶ: ರೈತರ ಸಮಸ್ಯೆ ನಿವಾರಿಸಲು ಆಗ್ರಹ   

ಸೊರಬ: ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಸಾಲ ಮನ್ನಾ ಮಾಡಬೇಕು. ನಿರಂತರ 12 ತಾಸುಗಳ 3 ಫೇಸ್ ವಿದ್ಯುತ್ ಪೂರೈಸಬೇಕು. ಸಾಗುವಳಿ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸಬಾರದು. ರೈತ ವಿರೋಧಿ ಕಾನೂನುಗಳು ರದ್ದಾಗಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
 

ಸೊರಬದಲ್ಲಿ ಮಂಗಳವಾರ ನಡೆದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಾವ ಸರ್ಕಾರವೂ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ಯಾವ ರಾಜಕೀಯ ಪಕ್ಷಕ್ಕೂ ರೈತರ ಬಗ್ಗೆ ಕಾಳಜಿಯಿಲ್ಲ. ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

ವಿದ್ಯುತ್ ಪೂರೈಕೆಯಲ್ಲಿ ನಗರ ಹಾಗೂ ಗ್ರಾಮೀಣ ಎಂಬ ಅಸಮಾನತೆ ತೊಲಗಬೇಕು. ಅಡಿಕೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಅವಿವೇಕದ ನಿರ್ಧಾರ. ಜನರ ಒತ್ತಡದ ನೆಪದಲ್ಲಿ ಜನರಿಗೆ ಹೊರೆ ಆಗುವುದು ಸರಿಯಲ್ಲ ಎಂದರು.

ಸಮಾವೇಶದಲ್ಲಿ ತಹಶೀಲ್ದಾರ್ ಒಳಗೊಂಡಂತೆ, ವಿವಿಧ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ರೈತರಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಸ್ಪಷ್ಟನೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ, ಪದಾಧಿಕಾರಿಗಳಾದ ಬಸವರಾಜಪ್ಪ, ಸಿದ್ದವೀರಪ್ಪ, ಷಣ್ಮುಖಪ್ಪ, ಬಿ. ವೀರಭದ್ರಪ್ಪ ಗೌಡ, ಉಮೇಶ್ ಪಾಟೀಲ್, ಈಶ್ವರಪ್ಪ, ಡಿ. ಶಿವಪ್ಪ ಸೇರಿದಂತೆ ವಿವಿಧ ಶಾಖೆಗಳ ಮುಖಂಡರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.