ADVERTISEMENT

ಹಣ ಗಳಿಕೆಯ ಶಿಕ್ಷಣದಿಂದ ಪ್ರಯೋಜನವಿಲ್ಲ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ದಾವಣಗೆರೆ: ಕೇವಲ ಹಣ ಗಳಿಕೆಗಾಗಿ ಶಿಕ್ಷಣ ಪಡೆದರೆ ಪ್ರಯೋಜನವಿಲ್ಲ. ಜೀವನೋಪಾಯ ಶಿಕ್ಷಣವನ್ನೂ ಪಡೆಯಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಸಲಹೆ ನೀಡಿದರು.

ನಗರದ ಮಾಚಿದೇವ ಸಮುದಾಯ ಭವನದಲ್ಲಿ ಭಾನುವಾರ ಜಿಲ್ಲಾ ಮಡಿವಾಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಮಹಾಸಭೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಇಂದು ಉತ್ತಮ ನೌಕರಿ ಪಡೆದು ಹಣ ಗಳಿಸಲು ಸೀಮಿತವಾಗಿದೆ. ಎಷ್ಟೋ ಮಂದಿ ಹಣ ಗಳಿಕೆಗಾಗಿ ವಿದೇಶಕ್ಕೂ ಹೋಗುತ್ತಾರೆ. ಆದರೆ, ಇವೆಲ್ಲದಕ್ಕಿಂತ ಮುಖ್ಯವಾಗಿ ಜೀವನೋಪಾಯ ಶಿಕ್ಷಣ ಪಡೆದು ಮನೆಯ ಹಿರಿಯರ ಜತೆ ಬಾಳುವುದನ್ನೂ ಕೂಡಾ ವಿದ್ಯಾರ್ಥಿಗಳು ಕಲಿಯಬೇಕು ಎಂದು ಅವರು ಕಿವಿಮಾತು ಹೇಳಿದರು.

ಸಮಾಜವನ್ನು ಅಭಿವೃದ್ಧಿಗೊಳಿಸಬೇಕೆಂಬ ಛಲದಿಂದ ಇನ್ನೊಂದು ಸಮಾಜದ ಮೇಲೆ ಸವಾರಿ ಸಲ್ಲದು. ಸಮಾಜದ ಎಲ್ಲಾ ಮುಖಂಡರು ಸಂಘಟಿತರಾಗಿ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಡಿವಾಳ ಸಮಾಜದ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಅವರ ಜೀವನಕ್ಕೆ ಸಂಬಂಧಿಸಿದ ರೂ 500 ಬೆಲೆಬಾಳುವ ಪುಸ್ತಕಗಳನ್ನು ಕೊಡುಗೆ ನೀಡುವುದಾಗಿ ಶಿವಯೋಗಿಸ್ವಾಮಿ ಭರವಸೆ ನೀಡಿದರು.

ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ  ಪಿ.ಕೆ. ಮಹಾಂತೇಶ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ  ನಾಗರಾಜ, ಎಂ.ಎಚ್. ಲಕ್ಷ್ಮಣ, ಎನ್.ಡಿ. ಮಡಿವಾಳರ್ ಹಾಜರಿದ್ದರು. ಎಂ. ಅಂಜನಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.