ADVERTISEMENT

ಹಸುವಿನ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಅರಸೀಕೆರೆ: ಚಿರತೆಯೊಂದು ಗರ್ಭಿಣಿ ಹಸುವಿನ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಚಿಕ್ಕಹಲ್ಕೂರಿನಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.

  ಗಾಯಗೊಂಡಿರುವ ಹಸು ಜೆಸಿಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ರಮೇಶ್ ಅವರಿಗೆ ಸೇರಿದ್ದಾಗಿದೆ. ನಸುಕಿನಲ್ಲಿ ಚಿಕ್ಕಹಲ್ಕೂರು ಗ್ರಾಮಕ್ಕೆ ಬಂದ ಚಿರತೆ ಹಿತ್ತಲಿನಲ್ಲಿದ್ದ ಹಸುವಿನ ಮೇಲೆ ಎರಗಿದೆ. ಇದನ್ನು ನೋಡಿದ ನಾಯಿಗಳು ವಿಪರೀತವಾಗಿ ಬೊಗಳಿವೆ. ಅನುಮಾನಗೊಂಡ  ಗ್ರಾಮಸ್ಥರು ನಾಯಿಗಳು ಬೊಗಳಾಡುತ್ತಿದ್ದ ಕಡೆಗೆ ಬಂದಿದ್ದಾರೆ. ಇದರಿಂದ ಬೆದರಿದ ಚಿರತೆ ಅಲ್ಲಿಂದ ಪರಾರಿಯಾಗಿದೆ. ವಿಪರೀತ ರಕ್ತಸ್ರಾವದಿಂದಾಗಿ ಹಸು ತೀವ್ರ ಅಸ್ವಸ್ಥಗೊಂಡಿದೆ.

ಸೆಣಸಾಟದಲ್ಲಿ ಹಸು ಚಿರತೆಯನ್ನು ತಿವಿದಿದೆ. ಆಗ ಚಿರತೆ ಮುಂದಿನಿಂದ ದಾಳಿ ನಡೆಸಿ ನಾಲಿಗೆ ಸಮೇತ ಹಸುವಿನ ಬಾಯಿಯನ್ನು ಕಿತ್ತುಹಾಕಿದೆ. ಹಸುವಿನ ಹೊಟ್ಟೆಯ ಇಕ್ಕೆಲವನ್ನು ಪರಚಿರುವುದರಿಂದ ಹೆಚ್ಚು ರಕ್ತಸ್ರಾವವಾಗಿ ಹಸು ಸಂಜೆ ವೇಳೆಗೆ ಮೇವು ನೀರು ತ್ಯಜಿಸಿದೆ.

  ಮೂರು ದಿನಗಳ ಹಿಂದೆ ತಾಲ್ಲೂಕಿನ ಬಾಣಾವರ ಹೋಬಳಿ ಗವಿಮಠ ಹಾಗೂ ಭೈರಗೊಂಡನಹಳ್ಳಿ ಸಮೀಪ ಚಿರತೆ ಕಾಣಿಸಿಕೊಂಡಿತ್ತು. ಅದನ್ನು ಹಿಡಿಯಲು ಅರಣ್ಯ ಸಿಬ್ಬಂದಿ ನಡೆಸಿದ ಯತ್ನ ವ್ಯರ್ಥವಾಗಿದೆ.

ವಲಯ ಅರಣ್ಯಾಧಿಕಾರಿ ಜಯಣ್ಣ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.