ADVERTISEMENT

ಹಾಲಿನ ದರ ಏರಿಕೆ:ಯುವ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST
ಹಾಲಿನ ದರ ಏರಿಕೆ:ಯುವ ಕಾಂಗ್ರೆಸ್ ಪ್ರತಿಭಟನೆ
ಹಾಲಿನ ದರ ಏರಿಕೆ:ಯುವ ಕಾಂಗ್ರೆಸ್ ಪ್ರತಿಭಟನೆ   

ಶಿವಮೊಗ್ಗ: ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಶಿವಮೊಗ್ಗ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಗೋಪಿ ವೃತ್ತದಲ್ಲಿ ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಅವರ ಪ್ರತಿಕೃತಿ ದಹನ ಮಾಡಿದ ಕಾರ್ಯಕರ್ತರು, ಹಾಲಿನ ದರ ಏರಿಕೆ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹಾಲಿನ ದರವನ್ನು ದಿಢೀರನೇ ಮೂರು ರೂಪಾಯಿ ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ತೀವ್ರ ಹೊರೆಯಾಗಿದೆ. ಹಾಲಿನ ದರ ಏರಿಕೆಯಾಗುತ್ತಿದ್ದಂತೆ ಹೋಟೆಲ್‌ನ ಟಿ, ಕಾಫಿ  ದರವೂ ಏರಿಕೆಯಾಗಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರ 2ರೂ ಪ್ರೋತ್ಸಾಹಧನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ಇದನ್ನು ರೈತರಿಗೆ ಹಲವು ಹೈನುಗಾರಿಕೆ ಯೋಜನೆಗಳನ್ನು ರೂಪಿಸಿ, ಸಬ್ಸಿಡಿ ಮೂಲಕ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಹಲವು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ನಡೆಸುವುದೇ ದುಸ್ತರವಾಗಿರುವುದರಿಂದ ಅತೀ ಅಗತ್ಯವಾಗಿ ಬೇಕಾದ ಹಾಲಿನ ದರವನ್ನೂ ಸರ್ಕಾರ ಏರಿಕೆ ಮಾಡಿದ್ದು ಖಂಡನಾರ್ಹ. ಸರ್ಕಾರ ತಕ್ಷಣ ಈ ಏರಿಕೆಯನ್ನು ತಡೆದು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಶಿವಮೊಗ್ಗ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ರಂಗನಾಥ್, ಉಪಾಧ್ಯಕ್ಷ ಟಿ.ವಿ. ರಂಜಿತ್, ಎಚ್.ಪಿ. ಗಿರೀಶ್, ಎಂ. ಪ್ರವೀಣ್, ರೇಷ್ಮಾ, ಶ್ರೀನಿವಾಸ್, ಎಂ. ಧರ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.