ADVERTISEMENT

ಹಾಸನ-ಶ್ರವಣಬೆಳಗೊಳ: ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 18:40 IST
Last Updated 15 ಮಾರ್ಚ್ 2011, 18:40 IST

ಹಾಸನ: ‘ಹಾಸನ- ಶ್ರವಣಬೆಳಗೊಳ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ. ಈ ಹಳಿಗಳ ತಪಾಸಣೆ ನಡೆಸಿ ಆರು ತಿಂಗಳಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಪುನಃ ಆರಂಭಿಸಲಾಗುವುದು’ ಎಂದು ನೈರುತ್ಯ ರೈಲ್ವೆ ಮಹಾಪ್ರಬಂಧಕ ಕುಲದೀಪ ಚತುರ್ವೇದಿ ತಿಳಿಸಿದರು.

ಹಾಸನ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಿರುವ ನೂತನ ರೈಲ್ವೆ ವಿಶ್ರಾಂತಿ ಕೊಠಡಿಯನ್ನು ಮಂಗಳವಾರ ಉದ್ಘಾಟಿಸಿದ ಬಳಿಕ ಪತ್ರಕರ್ತರೊಡನೆ ಮಾತನಾಡಿದ ಅವರು ‘ಆರು ತಿಂಗಳಲ್ಲಿ ಈ ಮಾರ್ಗದಲ್ಲಿ ಪ್ರತಿ ನಿತ್ಯ ರೈಲು ಸಂಚಾರ ಆರಂಭವಾಗಲಿದೆ’ ಎಂದರು.

ಹಾಸನ- ಶ್ರವಣ ಬೆಳಗೊಳ ಮಧ್ಯೆ ಕಳೆದ ಮಸ್ತಕಾಭಿಷೇಕದ ಸಂದರ್ಭದಲ್ಲಿ ರೈಲು ಸಂಚಾರ ಆರಂಭವಾಗಿತ್ತು. ನಂತರದ ದಿನಗಳಲ್ಲಿ ವಿವಿಧ ಕಾರಣಗಳಿಂದಾಗಿ ಅದು ಸ್ಥಗಿತಗೊಂಡಿತ್ತು. ಹಳಿಗಳು ಈಗಲೂ ಸುಸ್ಥಿತಿಯಲ್ಲಿವೆ ಎಂದು ತಿಳಿಸಿದರು.

‘ಮಂಗಳೂರು - ಶ್ರವಣಬೆಳಗೊಳ- ಬೆಂಗಳೂರು ರೈಲು ಮಾರ್ಗದ ಯೋಜನೆಗೆ ಕುಣಿಗಲ್ ಸಮೀಪ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ತೊಂದರೆ ಉಂಟಾಗಿದೆ. ಸರ್ಕಾರ ಭೂಸ್ವಾಧೀನ ಮಾಡಿ ಕೊಟ್ಟ ಬಳಿಕ ರೈಲ್ವೆ ಇಲಾಖೆ ಕಾಮಗಾರಿ ಮುಂದುವರಿಸಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.