ADVERTISEMENT

ಹೆದ್ದಾರಿಯಲ್ಲಿ ಖಾಸಗಿ ಬಸ್ ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ರಾಮನಗರ: ಕೆಲ ಷರತ್ತುಗಳನ್ನು ಒಡ್ಡಿ ಖಾಸಗಿ ಬಸ್‌ಗಳಿಗೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್ ಅನುಮತಿ ನೀಡಿದ್ದಾರೆ. ಇದಕ್ಕೆ ಖಾಸಗಿ ಬಸ್ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ಜಿಲ್ಲಾ ವ್ಯಾಪ್ತಿಯ ಬೆಂ-ಮೈ ರಸ್ತೆಯಲ್ಲಿ ಬುಧವಾರದಿಂದ ಖಾಸಗಿ ಬಸ್‌ಗಳ ಪ್ರಯಾಣ ಪುನರಾರಂಭವಾಗಿದೆ.

ಪರವಾನಗಿ ಮತ್ತು ಸಂಚಾರದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳ ಸಂಚಾರವನ್ನು ತಿಂಗಳಿಂದ ನಿಲ್ಲಿಸಲಾಗಿತ್ತು. ಗ್ರಾಮೀಣ ಮಾರ್ಗದಲ್ಲಿ ಸಂಚರಿಸುವ ಅನುಮತಿ ಪಡೆದು, ಹೆದ್ದಾರಿಯಲ್ಲಿ ಸಂಚರಿಸುವುದು ಸರಿಯಲ್ಲ. ಇದು ಸ್ಪಷ್ಟ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಎಸ್.ಪಿ ಅವರೇ ಬಸ್ ಸಂಚಾರಕ್ಕೆ ತಡೆಯೊಡ್ಡುವಂತೆ ಸೂಚಿಸಿದ್ದರು.

`ನಾಲ್ಕು ದಶಕಳಿಂದ ಖಾಸಗಿ ಬಸ್‌ಗಳು ಈ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಇದನ್ನೇ ಅವಲಂಬಿಸಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಅಲ್ಲದೆ ಸಹಸ್ರಾರು ಬಡ ಪ್ರಯಾಣಿಕರು ನಿತ್ಯ ಬೆಂಗಳೂರಿಗೆ ಹೋಗಿ ಬರಲು ಈ ಬಸ್‌ಗಳು ಸಹಕಾರಿಯಾಗಿವೆ. ಗಾರ್ಮೆಂಟ್ಸ್ ಸಿಬ್ಬಂದಿಗಂತೂ ಈ ಬಸ್‌ಗಳು ವರವಾಗಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಹೆದ್ದಾರಿಯಲ್ಲಿ ಬರುವ ಗ್ರಾಮಗಳಲ್ಲಿ ನಿಲ್ಲಿಸುವುದಿಲ್ಲ. ಆದರೆ ಈ ಭಾಗದ ಜನತೆಗೆ ಖಾಸಗಿ ಬಸ್‌ಗಳೇ ಸಾರಿಗೆ ಸೌಕರ್ಯ ಕಲ್ಪಿಸಿರುವುದು. ಹಾಗಾಗಿ ಅನುಮತಿ ನೀಡಿದರೆ ಸಾಕಷ್ಟು ಕುಟುಂಬಕ್ಕೆ ನೆರವಾಗುತ್ತದೆ~ ಎಂದು ಮನವಿ ಮಾಡಿದ್ದರು.

ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಇತರ ಪ್ರಭಾವಿ ನಾಯಕರಿಂದಲೂ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಆರಂಭದಲ್ಲಿ ಇದಕ್ಕೆಲ್ಲ ಎಸ್.ಪಿ ಬಗ್ಗಿರಲಿಲ್ಲ. ಬಡ ಪ್ರಯಾಣಿಕರು ಮತ್ತು ಗಾರ್ಮೆಂಟ್ಸ್‌ಗೆ ಹೋಗಿ ಬರುವ ಜನತೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಷರತ್ತುಗಳನ್ನು ಒಡ್ಡಿ ಬಸ್ ಸಂಚರಿಸಲು ಈಗ ಅನುಮತಿ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.