ಧಾರವಾಡ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾಂ) ಅನುಭವಿಸುತ್ತಿರುವ ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಯೂನಿಟ್ಗೆ 88 ಪೈಸೆ ದರ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್ಕುಮಾರ್ ಪಾಂಡೆ, ಅವರು ಸಾರ್ವಜನಿಕರ ತೀವ್ರ ಆಕ್ಷೇಪದ ನಡುವೆ ಬುಧವಾರ ತಿಳಿಸಿದರು.
ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಏರ್ಪಡಿಸಿದ್ದ `ವಿದ್ಯುತ್ ದರ ನಿಗದಿ~ ಕುರಿತ ಸಾರ್ವಜನಿಕರ ಆಕ್ಷೇಪಣಾ ಅರ್ಜಿಗಳ ವಿಚಾರಣೆ ಸಭೆಯಲ್ಲಿ ಅವರು ಮಾತನಾಡಿದರು.
`ವಿದ್ಯುತ್ ದರ ಹೆಚ್ಚಳ ಪ್ರಸ್ತಾವ ಕುರಿತು ಗ್ರಾಹಕರನ್ನು ಸಮಾಲೋಚನೆಗಾಗಿ ಕರೆಯಲಾಗಿದೆ. ಆಯೋಗ ಕರೆದಿರುವ ಸಭೆ ಇದಾಗಿದ್ದು, ಇದರಲ್ಲಿ ಭಾಗವಹಿಸಿರುವ ಹೆಸ್ಕಾಂನ ಕೆಳ ಹಂತದ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು ಏಕೆ~ ಎಂದೂ ಸಿಟ್ಟಿಗೆದ್ದ ಸಾರ್ವಜನಿಕರು ಆಕ್ಷೇಪಣೆ ವ್ಯಕ್ತಪಡಿಸಿದರು. ಜನರ ಆಕ್ಷೇಪದಿಂದಾಗಿ ಹೆಸ್ಕಾಂ ಅಧಿಕಾರಿಗಳು ಸಭೆಯಿಂದ ಹೊರನಡೆದರು. ನಂತರ ಪಾಂಡೆ ಅವರು ದರ ಹೆಚ್ಚಳದ ಅನಿವಾರ್ಯತೆಯನ್ನು ವಿವರಿಸಿದರು.
ಗ್ರಾಹಕರಿಗೆ ಹೊರೆ ಮಾಡುವುದು ಹೆಸ್ಕಾಂ ಉದ್ದೇಶವಲ್ಲ. ಆದರೆ ವಿದ್ಯುತ್ ಪೂರೈಕೆಯಲ್ಲಿ ಗ್ರಾಹಕರಿಗೆ ತೊಂದರೆಯಾಗಬಾರದು ಎಂಬುದು ಸಂಸ್ಥೆಯ ಉದ್ದೇಶ ಎಂದು ಅವರು ಗ್ರಾಹಕರಿಗೆ ಸಮಜಾಯಿಷಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.