ADVERTISEMENT

ಹೊನ್ನಾಳಿ: ರಿಯಾಯ್ತಿ ದರದ ಬಿತ್ತನೆ ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:50 IST
Last Updated 1 ಜೂನ್ 2011, 18:50 IST

ಹೊನ್ನಾಳಿ: ಸರ್ಕಾರ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜಗಳನ್ನು ಒದಗಿಸುತ್ತಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿ ಬುಧವಾರ ರಿಯಾಯ್ತಿ ದರದಲ್ಲಿ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.

ಕಸಬಾ, ಕುಂದೂರು, ನ್ಯಾಮತಿ, ಗೋವಿನಕೋವಿ, ಸಾಸ್ವೆಹಳ್ಳಿ, ಚೀಲೂರು ರೈತ ಸಂಪರ್ಕ ಕೇಂದ್ರಗಳು ಹಾಗೂ ಗೊಲ್ಲರಹಳ್ಳಿ, ಬೆಳಗುತ್ತಿ ಹೆಚ್ಚುವರಿ ಕೇಂದ್ರಗಳಲ್ಲಿ ರಿಯಾಯ್ತಿ ದರದ ಬಿತ್ತನೆ ಬೀಜ ನೀಡಲಾಗುವುದು, ರೈತರು ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಂದ ಪರವಾನಗಿ ಪತ್ರ ತಂದು ಸೌಲಭ್ಯ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ. ರೇವಣಸಿದ್ದನಗೌಡ ಮಾತನಾಡಿ, ಪ್ರತಿ ಎಕರೆಗೆ ಒಂದರಂತೆ ಕನಿಷ್ಠ 5 ಎಕರೆಯವರೆಗೆ 5 ಪ್ಯಾಕೆಟ್‌ಗಳಷ್ಟು ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು, ಸಂಕರಣ ಮೆಕ್ಕೆಜೋಳಕ್ಕೆ ಪ್ರತಿ ಕೆ.ಜಿ.ಗೆ ರೂ. 30, ಜೋಳಕ್ಕೆ ರೂ. 23.50, ತೊಗರಿಗೆ ರೂ. 32.50, ಹೆಸರು ಕಾಳಿಗೆ ರೂ. 40 ಹಾಗೂ ಅಲಸಂದೆಗೆ ರೂ. 25 ನಿಗದಿಪಡಿಸಲಾಗಿದೆ ಎಂದರು.

ರೈತರು ಗೊಬ್ಬರ ಮತ್ತು ಬಿತ್ತನೆ ಬೀಜ ಖರೀದಿಯ ರಸೀದಿಗಳನ್ನು ಇಟ್ಟುಕೊಳ್ಳಬೇಕು, ಅಕ್ಕಡಿ ಬೆಳೆಗಳಾಗಿ ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಹೆಸರು, ಉದ್ದಿನ ಬೆಳೆಗಳನ್ನು ಕಡ್ಡಾಯವಾಗಿ ಬೆಳೆಯಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.