ADVERTISEMENT

ಅಂಗವಿಕಲರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 9:15 IST
Last Updated 22 ಫೆಬ್ರುವರಿ 2011, 9:15 IST

ಗುಳೇದಗುಡ್ಡ: ಅಂಗವಿಕಲರ ಬಸ್‌ಪಾಸ್ ದರ ಹೆಚ್ಚಳವನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಮಣಿಕಂಠ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕಲ್ಮೇಶ್ವರ ಅಂಗವಿಕಲರ ಸಲಹಾ ಕೇಂದ್ರ, ಬೆಥನಿ ಸಂಜೀವಿನಿ ಕೇಂದ್ರ ಮತ್ತು ತಾಲ್ಲೂಕು ಅಂಗವಿಕಲರ ಸಂಘದ ಆಶ್ರಯದಲ್ಲಿ ಸೋಮವಾರ ಅಂಗವಿಕಲರು ಪ್ರತಿಭಟನೆ ನಡೆಸಿದರು.

  ಮೆರವಣಿಗೆ ಮೂಲಕ ಪುರಸಭೆ ಕಾರ್ಯಾಲಯಕ್ಕೆ ಹಾಗೂ ವಿಶೇಷ ತಹಶೀಲ್ದಾರ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಬಸ್‌ಪಾಸ್ ದರವನ್ನು ಅನಿರೀಕ್ಷಿತವಾಗಿ ಹೆಚ್ಚಿಸಿರುವ ಕ್ರಮವನ್ನು ಕೈ ಬಿಟ್ಟು ಮೊದಲಿನ ದರದಲ್ಲೇ ಪಾಸ್ ನವೀಕರಣಗೊಳಿಸಬೇಕು, ಬಸ್‌ಪಾಸ್‌ಗೆ ಈಗಿರುವ 100 ಕಿ.ಮೀ. ಅಂತರವನ್ನು ಹೆಚ್ಚಿಸಬೇಕು.
 
ಅಂಗವಿಕಲರಿಗೆ ಪ್ರತ್ಯೇಕ ಹಣಕಾಸು ನಿಗಮ ಸ್ಥಾಪಿಸಬೇಕು, ಆಸರೆ, ಇಂದಿರಾ ಯೋಜನೆ ಮತ್ತು ಅಂಬೇಡ್ಕರ್ ಯೋಜನೆಯಲ್ಲಿ ಅಂಗವಿಕಲರಿಗೆ ನಿವೇಶನ ನೀಡಬೇಕು ಎಂದು ಮುಂತಾದ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪ್ರವೀಣ ಕಡಿಬಾಗಿಲ, ಹುಚ್ಚೇಶ ಯಂಡಿಗೇರಿ, ರವಿ ಗದಗಿನ, ಮಾಗುಂಡಪ್ಪ ಜವಳಗದ್ದಿ, ತುಳಸಿಗಿರಿಯಪ್ಪ ಆಡಿನ, ಸಿದ್ದಾರೋಢ ಕೊಪ್ಪದ, ಮಲ್ಲಪ್ಪ ಮಡ್ಡಿ, ಸಂಗಮೇಶ ಭಾವಿಕಟ್ಟಿ, ರಘು ಹುಬ್ಬಳ್ಳಿ, ಬೆಥನಿ ಸಂಜೀವಿನಿ ಕೇಂದ್ರದವರು, ವಿ.ಆರ್. ಡಬ್ಲೂ, ಎಂ.ಆರ್. ಡಬ್ಲೂ ಕಾರ್ಯಕರ್ತರು ಪಾಲ್ಗೊಂಡಿದ್ದರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.