ADVERTISEMENT

ಅಕ್ಕಿಯೊಂದಿಗೆ ಜೋಳ ವಿತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 8:25 IST
Last Updated 3 ಜುಲೈ 2013, 8:25 IST

ಅಮೀನಗಡ: ಪಡಿತರ ಚೀಟಿದಾರರಿಗೆ ಅಕ್ಕಿಯೊಂದಿಗೆ ಜೋಳವನ್ನು ವಿತರಿಸಬೇಕು ಎಂದು ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ಸೂಳೇಭಾವಿ ಗ್ರಾಮ ಘಟಕ, ರೈತರ ಸಂಘ, ಕರವೇ ಗ್ರಾಮ ಘಟಕದ ಜಂಟಿ ಆಶ್ರಯದಲ್ಲಿ ಮಂಗಳವಾರ ಅಮೀನಗಡದ ಉಪತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು.

ಸೂಳೇಭಾವಿ ಗ್ರಾಮದಲ್ಲಿ ಸಮಾವೇಶಗೊಂಡಿದ್ದ ತಾಲ್ಲೂಕಿನ ವಿವಿಧ ಭಾಗದ ರೈತರು ಅಲ್ಲಿಂದ ಅಮೀನಗಡದ ವರೆಗೆ ಪಾದಯಾತ್ರೆ ಮೂಲಕ ತೆರಳಿ ಧರಣಿ ನಡೆಸಿದರು. ರೈತರ ಹಿತ ಕಾಪಾಡದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಬಸಯ್ಯ ಹಿರೇಮಠ ಮಾತನಾಡಿ, `ರೈತರು ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೇ ಸಾಕಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ. ಸತತ ಮೂರು ವರ್ಷಗಳ ಬರಗಾಲದಿಂದ ರೈತರ ಪರಿಸ್ಥಿತಿ ಹದಗೆಟ್ಟಿದೆ. ರೈತರನ್ನು ಒಡೆದು ಆಳುವ ನೀತಿಯನ್ನು ಕೈಬಿಟ್ಟು ಉತ್ತಮ ಯೋಜನೆಗಳನ್ನು ಜಾರಿಗೊಳಿಸಬೇಕು' ಎಂದು ಆಗ್ರಹಿಸಿದರು.

ಕರವೇ ಗ್ರಾಮ ಘಟಕದ ಅಧ್ಯಕ್ಷ ಸಂತೋಷ ಲೂತಿಮಠ, `ಬಡವರಿಗೆ ವಿತರಿಸುವ ಅಕ್ಕಿಯನ್ನು ಛತ್ತಿಸ್‌ಗಿಡದಿಂದ ಕೆ.ಜಿ ಅಕ್ಕಿಗೆ ್ಙ 27 ನೀಡಿ ಖರೀದಿ ಮಾಡಿ 30 ಕೆ.ಜಿ ಅಕ್ಕಿ ಹಂಚುವ ಬದಲು 15 ಕೆ.ಜಿ ಅಕ್ಕಿ, 15 ಕೆ.ಜಿ ಜೋಳವನ್ನು ವಿತರಿಸಬೇಕು. ಆ ಮೂಲಕ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಜೋಳ ಬೆಳೆಯುವ ರೈತರ ಹಿತ ಕಾಪಾಡಬೇಕು' ಎಂದು ಮನವಿ ಮಾಡಿದರು.

ಭಾರತೀಯ ಕೃಷಿಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ನವೀನಕುಮಾರ ಹೆಬ್ಬಳ್ಳಿ, `ಕಳೆದ ಹಲವು ವರ್ಷಗಳಿಂದ ರೈತರಿಗೆ ಬೆಳೆ ವಿಮೆ ನೀಡಿಲ್ಲ. ಕೂಡಲೇ ಬೆಳೆ ವಿಮೆ ಸೌಲಭ್ಯ ನೀಡಬೇಕು' ಎಂದು ಆಗ್ರಹಿಸಿದರು. ತಹಶೀಲ್ದಾರ್ ಪಂಪನಗೌಡ ಮೇಲ್ಸಿಮೆ ಮನವಿ ಪತ್ರ ಸ್ವೀಕರಿಸಿದರು. ಉಪ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೌಡ ಹಾಜರಿದ್ದರು.

ಕೃಷಿಕ ಸಮಾಜದ ಗ್ರಾಮ ಘಟಕದ ಅಧ್ಯಕ್ಷ ಸಂಗಯ್ಯ ಮರಳಯ್ಯನಮಠ, ಚಂದಾಲಿಂಗಪ್ಪ ಪಲ್ಲೇದ, ಶಿವು ಶಿರೋಳ, ಸಿದ್ದು ಗರಸಂಗಿ, ವಿರೇಶ ಗೋಡೆಕರ್, ವಿಠ್ಠಲ ಕಂಬಾರ, ರಮೇಶ ಮಾದರ, ಮಲ್ಲನಗೌಡ ತುಂಬದ, ಬಸವಂತಪ್ಪ ತಾರಿವಾಳ, ಅಜೀತ್ ಕೋಟೆಕಲ್, ತಿಪ್ಪಣ್ಣ ರಗಟಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.