ADVERTISEMENT

ಆಶ್ರಯ ಸಮಿತಿ ಸಭೆ ಕರೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 5:30 IST
Last Updated 14 ಆಗಸ್ಟ್ 2012, 5:30 IST

ಬಾಗಲಕೋಟೆ: ಆಶ್ರಯ ಮನೆ ಹಂಚಿಕೆಯಲ್ಲಿ ಆಗಿರುವ ತೊಡಕುಗಳ ನಿವಾರಣೆ ಸಂಬಂಧ ಆಶ್ರಯ ಸಮಿತಿಯ ವಿಶೇಷ ಸಭೆ ಕರೆಯುವಂತೆ ನಗರಸಭೆ ಪೌರಾಯುಕ್ತರಿಗೆ ಶಾಸಕ ವೀರಣ್ಣ ಚರಂತಿಮಠ ಸೂಚಿಸಿದರು.

ನಗರಸಭೆ ಆವರಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಆಶ್ರಯ ಮನೆಗಳನ್ನು ಶ್ರೀಮಂತರು ಪಡೆದುಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ. ಈಗಾಗಲೇ ಗುರುತಿಸಿ ಮನೆಗಳನ್ನು ಹಿಂಪಡೆದು, ಶೆಡ್‌ಗಳಲ್ಲಿ, ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಅನರ್ಹರಿಂದ ಆಶ್ರಯ ಮನೆಗಳನ್ನು ಹಿಂಪಡೆಯುವಲ್ಲಿ ಒಂದು ವೇಳೆ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗಿದ್ದರೆ ಸರಿಪಡಿಸುವಂತೆ ಸಲಹೆ ನೀಡಿದರು.

ಪ್ರತಿಕ್ರಿಯಿಸುವುದಿಲ್ಲ: `ಜೆಡಿಯು ರಾಜ್ಯ ಘಟಕದ ಅಧ್ಯಕ್ಷರು, ಜೆಡಿಯು ರಾಷ್ಟ್ರ ಘಟಕದ ಉಪಾಧ್ಯಕ್ಷರೂ ಆದ ಎಂ.ಪಿ.ನಾಡಗೌಡ ಅವರು ಇತ್ತೀಚೆಗೆ ಆಶ್ರಯ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿದೆ ಎಂದು ನಾಲ್ಕು ಮಂದಿ ಕೂಡಿಸಿಕೊಂಡು ಮಾಡಿರುವ ಪ್ರತಿಭಟನೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಲ್ಲ~ ಎಂದರು.

`ಅಂತಹ ದೊಡ್ಡ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ, ನಾನು ಬಹಳ ಚಿಕ್ಕವನು~ ಎಂದು ವ್ಯಂಗ್ಯವಾಡಿದರು.

ಸ್ಥಾಯಿ ಸಮಿತಿಗೆ ಆಯ್ಕೆ: ನಗರಸಭೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ಮುತ್ತಪ್ಪ ಪೂಜಾರಿ ಅವರನ್ನು ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಶಾಸಕ ವೀರಣ್ಣ ಚರಂತಿಮಠ, ಎಂಎಲ್‌ಸಿ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಗುಳೇದ ಮತ್ತು ಸದಸ್ಯರು ಅಭಿನಂದಿಸಿದರು.

ವೃತ್ತ ನಾಮಕರಣ: ನಗರದ ಪ್ರಮುಖ ವೃತ್ತಗಳಿಗೆ ಇನ್ನು ಮುಂದೆ ನಾಮಕರಣ ಮಾಡುವಂತೆ ಬರುವ ಅರ್ಜಿಗಳನ್ನು ಇಟ್ಟುಕೊಂಡು, ಒಮ್ಮೆಗೆ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸುವಂತೆ ಶಾಸಕ ವೀರಣ್ಣ ಚರಂತಿಮಠ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಒಳಚರಂಡಿ ಮಂಡಳಿ ವಿರುದ್ಧ ಗರಂ: ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದ ಕರ್ನಾಟಕ ಒಳಚರಂಡಿ ಮಂಡಳಿ ಅಧಿಕಾರಿ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದ ಶಾಸಕರು, ಮಂಡಳಿಯನ್ನೇ ರದ್ದುಗೊಳಿಸಲು ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು.

ಸ್ವಚ್ಛತೆ ಕಾಪಾಡಿ: ನಗರದ ಚರಂಡಿಗಳು ಬ್ಲಾಕ್ ಆಗದಂತೆ ನೋಡಿಕೊಳ್ಳಬೇಕು.  ಎಲ್ಲೂ ಕೊಳಚೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.