ADVERTISEMENT

ಐಸಿಯುನಲ್ಲಿ ಸರ್ಕಾರಿ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2011, 8:00 IST
Last Updated 8 ಆಗಸ್ಟ್ 2011, 8:00 IST
ಐಸಿಯುನಲ್ಲಿ ಸರ್ಕಾರಿ ಆಸ್ಪತ್ರೆ
ಐಸಿಯುನಲ್ಲಿ ಸರ್ಕಾರಿ ಆಸ್ಪತ್ರೆ   

ಬಾಗಲಕೋಟೆ: ಮೇಲ್ನೋಟಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಂತೆ ಕಾಣಿಸುವ ನಗರದ ಸಾರ್ವಜನಿಕ ಆಸ್ಪತ್ರೆ ಸೂಕ್ತ ವೈದ್ಯಕೀಯ ಸಿಬ್ಬಂದಿ, ಮೂಲಸೌಲಭ್ಯ ಕೊರತೆಯಿಂದ ಬಳಲುತ್ತಿದೆ.

ರೂ 4.14 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಆಸ್ಪತ್ರೆ ಕೇವಲ ಆರು ತಿಂಗಳ ಹಿಂದಷ್ಟೇ ಕಾರ್ಯಾ ರಂಭ ಮಾಡಿದೆ. ಆದರೆ ಈ ಆಸ್ಪತ್ರೆ ಬಡವರ ಕಾಯಿ ಲೆಗೆ ಚಿಕಿತ್ಸೆ ಒದಗಿಸುವಲ್ಲಿ ವಿಫಲವಾಗಿದೆ. 

ಆಸ್ಪತ್ರೆಯ ಮೊದಲ ಅಂತಸ್ಥಿನಲ್ಲಿರುವ ಕೊಠಡಿ ಗಳು ಬಳಕೆಯಾಗದೇ ದೂಳು ತುಂಬಿಕೊಂಡು ಹಾಳು ಬಿದ್ದಿದೆ. ವೈದ್ಯಕೀಯ ಸಲಕರಣೆಗಳು, ಔಷಧೋಪಕ ರಣಗಳು ಬಳಕೆಯಾಗದೇ ಮತ್ತು ಸೂಕ್ತ ನಿಗಾ ಇಲ್ಲದೇ ಹಾಳಾಗುತ್ತಿವೆ.

ಸಾಕಷ್ಟು ಪ್ರಮಾಣದ ಔಷಧಿ ಪೂರೈಕೆ ಇದೆ. ಕೊಠಡಿಗಳಿವೆ. ಆದರೆ ವೈದ್ಯರು ಮತ್ತು ಸಿಬ್ಬಂದಿ ಇಲ್ಲ ದಿರುವ ಆಸ್ಪತ್ರೆಗೆ ರೋಗಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ದೂರುಗಳು ಸಾಮಾನ್ಯವಾಗಿವೆ.

ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸೇರಿ ಕೇವಲ ಇಬ್ಬರು ವೈದ್ಯರಿದ್ದಾರೆ.  ಎಲ್ಲ ಚಿಕಿತ್ಸೆಯನ್ನೂ ಇವರೇ ಮಾಡ ಬೇಕಾಗಿದೆ. ಮೂರು ಮಂದಿ ದಾದಿಯರು, ಮೂರು ಮಂದಿ ಆಟೆಂಡರ್, ತಲಾ ಒಬ್ಬ ಎಸ್‌ಡಿಸಿ, ಎಫ್‌ಡಿಸಿ ಮಾತ್ರ ಇದ್ದಾರೆ.

ಆಸ್ಪತ್ರೆಯಲ್ಲಿ ಎಕ್ಸ್‌ರೇ ಕೊಠಡಿ ಇದೆ, ತಂತ್ರಜ್ಞ ರಿದ್ದಾರೆ. ಆದರೆ ಏಕ್ಸ್‌ರೇ ತೆಗೆಯುವ ಯಂತ್ರವೇ ಇಲ್ಲ, ಪ್ರಯೋಗಾಲಯವಿದೆ, ಅಗತ್ಯ ಸಿಬ್ಬಂದಿ ಮತ್ತು ಉಪಕರಣಗಳಿಲ್ಲ.

ಅನಾಥ ಆಸ್ಪತ್ರೆ: ಆಸ್ಪತ್ರೆಗೆ ಕುಡಿಯುವ ನೀರಿನ ಸಮಸ್ಯೆ ಇದೆ, ದೊಡ್ಡ ಆಸ್ಪತ್ರೆಗೆ ಒಬ್ಬ ಕಾವಲು ಗಾರನೂ ಇಲ್ಲ, ಯಾರಾದರು ಎಷ್ಟು ಹೊತ್ತಿಗಾ ದರೂ ಆಸ್ಪತ್ರೆಯ ಯಾವ ಕೊಠಡಿಗಾದರೂ ಪ್ರವೇಶಿ ಸಬಹುದು ಎಂಬ  ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಆಸ್ಪತ್ರೆಯಲ್ಲಿರುವ ಶಸ್ತ್ರಚಿಕಿತ್ಸಾ ಕೊಠಡಿ ಅವ್ಯವಸ್ಥೆ ಬಗ್ಗೆ ಸ್ವಂತ ಆಸ್ಪತ್ರೆಯ ವೈದ್ಯರೇ ಭಯ ವ್ಯಕ್ತ ಪಡಿಸುತ್ತಾರೆ. ಶಸ್ತ್ರಚಿಕಿತ್ಸಾ ಕೊಠಡಿಗೆ ಗಾಳಿ-ಬೆಳಕಿನ ವ್ಯವಸ್ಥೆಯೇ ಇಲ್ಲದಿರುವುದರಿಂದ ಕೊಠಡಿಯ ಬಾಗಿ ಲನ್ನು ತೆರೆದುಕೊಂಡು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ತಜ್ಞ ವೈದ್ಯರೇ ಹೇಳುತ್ತಾರೆ.

ಹನಿ ರಕ್ತವಿಲ್ಲ:  ಎರಡು ಅಂತಸ್ಥಿನ ಕಟ್ಟಡದಲ್ಲಿ ರೋಗಿಗಳ ಮತ್ತು ಸಿಬ್ಬಂದಿ ಅನುಕೂಲಕ್ಕೆ ಇರುವ ಲಿಫ್ಟ್ ಇದುವರೆಗೂ ಚಾಲನೆಗೊಂಡಿಲ್ಲ. ಹೆಸರಿಗಷ್ಟೇ ಇರುವ ರಕ್ತನಿಧಿ ಕೊಠಡಿಯಲ್ಲಿ ಸೊಳ್ಳೆಗಳಿಗೂ ಒಂದು ಹನಿ ರಕ್ತಸಿಗದಂತ ಪರಿಸ್ಥಿತಿ.  ಅಸ್ತಮಾ ಚಿಕಿತ್ಸಾ ಕೇಂದ್ರದ ಉಸಿರೇ ನಿಂತಿದೆ. ಸಣ್ಣಪುಟ್ಟ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಸ್ಪತ್ರೆಗೆ ಇಲ್ಲವೇ ಕುಮಾರೇಶ್ವರ ಆಸ್ಪತ್ರೆಗೆ ಕಳು ಹಿಸಲಾಗುತ್ತದೆ.
ಮೂಲಸೌಲಭ್ಯ ಮತ್ತು ವೈದ್ಯಕೀಯ ಸಿಬ್ಬಂದಿ ಒದಗಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿಯಾಗಲಿ, ಜಿಲ್ಲಾಡಳಿತವಾಗಲಿ, ಶಾಸಕ, ಸಂಸದರಾಗಲಿ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಹೋಟೆಲ್ ಊಟ: ಈ ಸಂಬಂಧ  `ಪ್ರಜಾವಾಣಿ~ ಯೊಂದಿಗೆ ಭಾನುವಾರ ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರೇಮಾ ವಿ.ಪಾಟೀಲ, ಆಸ್ಪತ್ರೆಗೆ ಒಬ್ಬೊಬ್ಬ ಮಕ್ಕಳ ತಜ್ಞ, ಮೂಳೆರೋಗ ತಜ್ಞ, ಅರವಳಿಕೆ ತಜ್ಞ, ದಂತವೈದ್ಯ ಮತ್ತು ಹೃದಯರೋಗ ತಜ್ಞರ ಅವಶ್ಯಕತೆ ಇದೆ ಎಂದು ಹೇಳಿದರು.

ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಮತ್ತು ಶಸ್ತ್ರ ಚಿಕಿತ್ಸಾ ಕೊಠಡಿಗೆ ಹವಾನಿಯಂತ್ರಿತ ವ್ಯವಸ್ಥೆ ಇಲ್ಲ ದಿರುವುದರಿಂದ ಚಿಕಿತ್ಸೆಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಅಡುಗೆ ತಯಾರಿಸುವ ವ್ಯವಸ್ಥೆ ಇಲ್ಲದೇ ಇರುವುದರಿಂದ ಚಿಕಿತ್ಸೆ ದಾಖಲಾಗುವ ರೋಗಿಗಳಿಗೆ   ಹೋಟೆಲ್‌ನಿಂದ ಒಬ್ಬ ರೋಗಿಗೆ ದಿನಕ್ಕೆ ಕೇವಲ ರೂ 50 ವೆಚ್ಚದಲ್ಲಿ ಊಟ ತರಿಸಿಕೊಡ ಲಾಗುತ್ತದೆ ಎಂದು ಹೇಳಿದರು.

ಆಸ್ಪತ್ರೆಗೆ ತಾಗಿಕೊಂಡಂತಿರುವ  ಸಿಬ್ಬಂದಿ ವಸತಿ ಗೃಹಗಳು ಸೋರುತ್ತಿವೆ. ನೀರು, ವಿದ್ಯುತ್ ಸಂಪರ್ಕ, ಬೀದಿದೀಪ, ರಸ್ತೆ ಇಲ್ಲ ಎಂದು ವೈದ್ಯರು ದೂರುತ್ತಾರೆ.

ಹಲವು ಬಾರಿ ಆಸ್ಪತ್ರೆಯ ಸಮಸ್ಯೆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಮತ್ತು ಸರ್ಕಾರದ ಗಮನಕ್ಕೆ ತರ ಲಾಗಿದೆ. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ,  ತಕ್ಷಣ ಆಸ್ಪತ್ರೆಗೆ ಮೂಲಸೌಲಭ್ಯ ಸೇರಿದಂತೆ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು  ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.