ADVERTISEMENT

ಖಜ್ಜಿಡೋಣಿವರೆಗೆ ರೇಲ್‌ಬಸ್‌ಗೆ ಚಾಲನೆ

ಭೂಸ್ವಾಧೀನ ತ್ವರಿತಗೊಳಿಸಲು ರಾಜ್ಯ ಸರ್ಕಾರಕ್ಕೆ ಸಂಸದ ಗದ್ದಿಗೌಡರ ಮನವಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 5:12 IST
Last Updated 16 ಜೂನ್ 2018, 5:12 IST

ಬಾಗಲಕೋಟೆ: ‘ರೈತರ ಮನವೊಲಿಸಿ ಭೂಸ್ವಾಧೀನಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಿ, ಬಾಗಲಕೋಟೆ–ಕುಡಚಿ ರೈಲು ಮಾರ್ಗದ ಉಳಿದ ಕಾಮಗಾರಿಯ ತ್ವರಿತವಾಗಿ ಪೂರ್ಣಗೊಳ್ಳಲು ಸಹಕರಿಸುವಂತೆ’ ರಾಜ್ಯ ಸರ್ಕಾರಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಮನವಿ ಮಾಡಿದರು.

ಬಾಗಲಕೋಟೆ–ಕುಡಚಿ ಮಾರ್ಗದ ಮೊದಲ ಹಂತದ 33 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಶುಕ್ರವಾರ ಖಜ್ಜಿಡೋಣಿವರೆಗೆ ನೂತನ ರೇಲ್‌ಬಸ್‌ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈಲು ಮಾರ್ಗ ನಿರ್ಮಾಣಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಡಚಣೆ ಮಾಡಿದ್ದವು. ಲೋಕಾಪುರ ಭಾಗದಲ್ಲಿ ಒಂದಷ್ಟು ಸಮಸ್ಯೆಯಾಗಿತ್ತು. ಆದರೆ ಅದನ್ನು ಕೆಲವರು ನನ್ನ ವೈಫಲ್ಯವೆಂಬಂತೆ ಬಿಂಬಿಸಲು ಹಿಂದಿನ ಚುನಾವಣೆ ವೇಳೆ ಪ್ರಯತ್ನಿಸಿದ್ದರು. ಕಾಮಗಾರಿ ಚುರುಕುಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆ ವಿಚಾರದಲ್ಲಿ ಹಿಂದಿನ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವರು ನೆರವು ನೀಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಶೀಘ್ರ ಸಭೆ ಕರೆಯಿರಿ..

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ಬಾಗಲಕೋಟೆ ಆದರ್ಶ ರೈಲು ನಿಲ್ದಾಣ ಎಂದು ಘೋಷಿಸಿ 10 ವರ್ಷ ಕಳೆದಿದೆ. ಆದರೆ ಆ ನಿಟ್ಟಿನಲ್ಲಿ ಯಾವುದೇ ಕೆಲಸ ನಡೆದಿಲ್ಲ. ರೈಲ್ವೆ ಸಿಬ್ಬಂದಿಯ ವಸತಿ ಗೃಹಗಳು ಅತ್ಯಂತ ದುಸ್ಥಿತಿಯಲ್ಲಿವೆ. ನೀವು ಇಲ್ಲಿ ಅಡ್ಡಾಡಿದರೆ ವಾಸ್ತವ ಸ್ಥಿತಿ ಗೊತ್ತಾಗುತ್ತದೆ’ ಎಂದು ವೇದಿಕೆಯಲ್ಲಿದ್ದ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್‌ಗೆ ಮನವಿ ಮಾಡಿದರು.

‘ಸೊಲ್ಲಾಪುರ–ಮೈಸೂರು ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಒಮ್ಮೆಯೂ ಸರಿಯಾದ ಸಮಯಕ್ಕೆ ಬಂದಿಲ್ಲ. ಕಲಬುರ್ಗಿ ಮೂಲಕ ಬೆಂಗಳೂರಿಗೆ ತೆರಳುವ ಬಸವ ಎಕ್ಸ್‌ಪ್ರೆಸ್ ರೈಲಿನ ಸಮಯದ ಅನಾನುಕೂಲ ಅದು ಬರೀ ಕಲಬುರ್ಗಿ ಭಾಗದವರಿಗೆ ಮಾತ್ರ ಅನುಕೂಲ ಎಂಬಂತಾಗಿದೆ. ನೀವು ಇಲ್ಲಿ ಪ್ರಯಾಣಿಕರ ಅಹವಾಲು ಆಲಿಸಲು ನಿಯಮಿತವಾಗಿ ಸಭೆಗಳನ್ನು ಕರೆದರೆ ನಾವೂ ಬಂದು ಸಮಸ್ಯೆ ಹೇಳಿಕೊಳ್ಳುತ್ತೇವೆ’ ಎಂದರು.

ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಮೈಸೂರು–ಶಿರಡಿ ಎಕ್ಸ್‌ಪ್ರೆಸ್‌ ರೈಲಿಗೆ ಬಾದಾಮಿ ಹಾಗೂ ಆಲಮಟ್ಟಿಯಲ್ಲಿ ನಿಲುಗಡೆ ನೀಡುವಂತೆ ಕೋರಿದರು.

ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಮಾತನಾಡಿ, ‘ಬಾಗಲಕೋಟೆ–ಕುಡಚಿ ರೈಲು ಮಾರ್ಗ ನಿರ್ಮಾಣ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರ ಕನಸು. ಕಾಮಗಾರಿ ಪೂರ್ಣಗೊಂಡಲ್ಲಿ ಈ ಭಾಗದ ಸಿಮೆಂಟ್, ಸಕ್ಕರೆ ಉದ್ಯಮದ ಬೆಳವಣಿಗೆಗೆ ಅನುಕೂಲವಾಗಲಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಮಾತನಾಡಿ, ‘ರೈಲ್ವೆಯ ಯಾವುದೇ ಯೋಜನೆಯನ್ನು ಉತ್ತರ ಕರ್ನಾಟಕ ಭಾಗದ ಜನತೆ ಹೋರಾಟ ಮಾಡಿಯೇ ಪಡೆಯಬೇಕಿದೆ. ನೂತನ ಮಾರ್ಗದ ಕಾಮಗಾರಿ ಇಷ್ಟೊಂದು ಆಮೆಗತಿಯಲ್ಲಿ ಸಾಗುತ್ತಿರುವುದು ನಮಗಂತೂ ಅತೃಪ್ತಿ ಮೂಡಿಸಿದೆ. ಶೀಘ್ರ ಉಳಿದ ಕೆಲಸವೂ ಪೂರ್ಣಗೊಳ್ಳಲಿ’ ಎಂದರು.

ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ನಾರಾಯಣ ಸಾ ಭಾಂಡಗೆ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಪಾಲ್ಗೊಂಡಿದ್ದರು.

ವಾರದಲ್ಲಿ 5 ದಿನ ಸಂಚಾರ

ವಾರದಲ್ಲಿ ಐದು ದಿನ (ಶನಿವಾರ–ಭಾನುವಾರ ಹೊರತಾಗಿ) ಬಾಗಲಕೋಟೆ–ಖಜ್ಜಿಡೋಣಿ ನಡುವೆ ರೇಲ್‌ಬಸ್ ಸಂಚರಿಸಲಿದೆ. ಬೆಳಿಗ್ಗೆ 7.45ಕ್ಕೆ ಬಾಗಲಕೋಟೆ ನಿಲ್ದಾಣದಿಂದ ಹೊರಡುವ ಈ ಪುಟ್ಟ ರೈಲು, 7.56ಕ್ಕೆ ನವನಗರ ನಿಲ್ದಾಣ ಬಿಡಲಿದೆ. 8.20ಕ್ಕೆ ಸೂಳಿಕೇರಿ, 8.38ಕ್ಕೆ ಕೆರಕಲಮಟ್ಟಿ, 8.56ಕ್ಕೆ ಹಿರೇಶೆಲ್ಲಿಕೇರಿ ಬಿಟ್ಟು 9.30ಕ್ಕೆ ಖಜ್ಜಿಡೋಣಿ ತಲುಪಲಿದೆ. ಅರ್ಧಗಂಟೆ ವಿಶ್ರಾಂತಿಯ ನಂತರ ಬೆಳಿಗ್ಗೆ 10 ಗಂಟೆಗೆ ಖಜ್ಜಿಡೋಣಿ ನಿಲ್ದಾಣ ಬಿಡಲಿದೆ. 10.28ಕ್ಕೆ ಹಿರೇಶೆಲ್ಲಿಕೇರಿ, 10.50ಕ್ಕೆ ಕೆರಕಲಮಟ್ಟಿ, 11.13ಕ್ಕೆ ಸೂಳಿಕೇರಿ, 11.28ಕ್ಕೆ ನವನಗರ ಬಿಟ್ಟು, 11.45ಕ್ಕೆ ಬಾಗಲಕೋಟೆ ನಿಲ್ದಾಣಕ್ಕೆ ಬರಲಿದೆ.

ರಿಸರ್ವೇಷನ್ ಕೌಂಟರ್‌ಗೆ ಅವಕಾಶ

ಬಾದಾಮಿ, ಜಮಖಂಡಿ ಹಾಗೂ ಹೊಳೆ ಆಲೂರಿನಲ್ಲಿ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳಿಗೆ (ರಿಸರ್ವೇಷನ್ ಕೌಂಟರ್) ನೈರುತ್ಯ ರೈಲ್ವೆ ಅವಕಾಶ ಕಲ್ಪಿಸಲಾಗಿದೆ. ಅವು ಶೀಘ್ರ ಕಾರ್ಯಾರಂಭ ಮಾಡಲಿವೆ. ಆ ಮೂಲಕ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದೆ. ಚಿತ್ರದುರ್ಗ–ಆಲಮಟ್ಟಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಕೈಗೊಳ್ಳಲು ಒಪ್ಪಿಗೆ ದೊರೆತಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.