ADVERTISEMENT

ಖೊಟ್ಟಿ ಸಹಿ: ಆಸ್ಪತ್ರೆ ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 8:00 IST
Last Updated 19 ಫೆಬ್ರುವರಿ 2011, 8:00 IST

ಬಾಗಲಕೋಟೆ: ಅಂಗವಿಕಲರ ಪ್ರಮಾಣಪತ್ರಕ್ಕೆ ವೈದ್ಯಾಧಿಕಾರಿಗಳ ಖೊಟ್ಟಿ ಸಹಿ ಮಾಡಿ ವಂಚಿಸಲು ಯತ್ನಿಸಿದ ಇಳಕಲ್ ಸರ್ಕಾರಿ ಆಸ್ಪತ್ರೆಯ ಕಿರಿಯ ಫಾರ್ಮಾಸಿಸ್ಟ್ ಎಸ್.ಎಸ್.ಪತ್ತಾರ ಅವರನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ಬಿ.ಚೌಧರಿ ಶುಕ್ರವಾರ ಅಮಾನತುಗೊಳಿಸಿದ್ದಾರೆ. ಇಳಕಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ತಾರ, ಅಂಗವಿಕಲರ ಪ್ರಮಾಣಪತ್ರಕ್ಕೆ ಖೊಟ್ಟಿ ಸಹಿ ಮಾಡಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಎ.ಟಿ.ಕಿರಗಿ ನವನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಸಾರ್ವಜನಿಕರಿಂದ ಹಣ ಪಡೆದು ನಕಲಿ ವೈದ್ಯಕೀಯ ಪ್ರಮಾಣಪತ್ರ ನೀಡಿದ ಕಾರಣಕ್ಕೆ ಪತ್ತಾರ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಕಿರಗಿ ಅವರ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಆಮಾನತುಗೊಳಿಸಲಾಗಿದೆ ಎಂದು ಡಾ.ಚೌಧರಿ ತಿಳಿಸಿದ್ದಾರೆ. ದುರ್ನಡತೆ ಆಪಾದನೆಯ ಮೇರೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಪ್ರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಪತ್ತಾರ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪತ್ತೆಗೆ ಮನವಿ: “ಅಂಗವಿಕಲರಿಗೆ ನಕಲಿ ಪ್ರಮಾಣಪತ್ರ ಪೂರೈಸಿದ ಆರೋಪಿಗಳನ್ನು ಬಂಧಿಸಿದರೆ ಅಥವಾ ಸೇವೆಯಿಂದ ಅಮಾನತುಗೊಳಿಸಿದರೆ ಸಾಲದು; ನಕಲಿ ಪ್ರಮಾಣಪತ್ರಗಳನ್ನು ಪತ್ತೆ ಮಾಡಿ ಅವುಗಳನ್ನು ರದ್ದುಪಡಿಸಬೇಕು” ಎಂದು ಶಬರೀಶ ಅಂಗವಿಕಲರ ಸಂಘದ ಮುಖಂಡ ಘನಶ್ಯಾಂ ಭಾಂಡಗೆ ಒತ್ತಾಯಿಸಿದ್ದಾರೆ.

“ಅನೇಕ ಜನರು ಅಂಗವೈಕಲ್ಯದ ನಕಲಿ ಪ್ರಮಾಣಪತ್ರ ಬಳಸಿಕೊಂಡು ಸರ್ಕಾರಿ ಸೌಲಭ್ಯ ಪಡೆಯುತ್ತಿರುವುದರಿಂದ ಅರ್ಹರು ಸೌಲಭ್ಯವಂಚಿತರಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಖೊಟ್ಟಿ ಪ್ರಮಾಣಪತ್ರ ಪತ್ತೆ ಮಾಡದಿದ್ದಾರೆ” ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.