ಬಾಗಲಕೋಟೆ: ಅಗ್ರಿಗೋಲ್ಡ್ ಕಂಪನಿಯ ಏಜೆಂಟರಿಗೆ ಗ್ರಾಹಕರು ಕಿರುಕುಳ ನೀಡುತ್ತಿದ್ದು, ಅವರಿಗೆ ಸರಿಯಾದ ತಿಳಿವಳಿಕೆ ನೀಡುವಂತೆ ಆಗ್ರಹಿಸಿ ಕಂಪನಿ ಏಜೆಂಟರು ಗುರುವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ ಅವರು, ಜಿಲ್ಲೆಯ ಬಹುತೇಕ ಎಲ್ಲ ಹಳ್ಳಿಗಳಲ್ಲಿ ಅಗ್ರಿ ಗೋಲ್ಡ್ ಕಂಪೆನಿ ಗ್ರಾಹಕರಿದ್ದಾರೆ. ಕಂಪೆನಿಯಿಂದ ಅವರಿಗೆ ಬರಬೇಕಿರುವ ಹಣ ತಡವಾಗಿರುವುದಕ್ಕೆ ಏಜೆಂಟರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ನಮ್ಮ ವಾಹನ, ಮನೆಯ ವಸ್ತುಗಳನ್ನು ಅಡಮಾನವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ದೂರಿದರು.
‘ಗ್ರಾಹಕರಿಗೆ ಕಂಪೆನಿಯಿಂದ ನ್ಯಾಯ ಒದಗಿಸಿಕೊಡಲು ಐದು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಆದರೆ ಯಾವುದೇ
ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಬಗ್ಗೆ ನ್ಯಾಯ ಕೊಡಿಸಲು ಮುಂದಾಗಬೇಕು. ಕಂಪನಿ ಗ್ರಾಹಕರಿಗೆ ಸರಿಯಾದ ತಿಳಿವಳಿಕೆ ನೀಡಬೇಕು. ಏಜೆಂಟರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಮನವಿ ಮಾಡಿದರು.
ಅನಿಲ್ ದಡ್ಡಿ, ಎಸ್.ಐ.ಹಮ್ಮಿದಡ್ಡಿ, ಆರ್.ಆರ್.ಬಳಿಗಾರ, ಎಸ್.ಜಿ.ಜೈನಾಪುರ, ಆರ್.ಎಲ್.ನಿಂಗನೂರು, ಎಚ್.ಡಿ.ಹುನ್ನೂರ, ಆರ್.ಆರ್.ಪಾಟೀಲ, ಬಾಲಚಂದ್ರ ತೆಗ್ಗಿ, ಎ.ಪಿ.ತಾಂಡೂರ, ಎ.ಎನ್.ಮುಲ್ಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.