ADVERTISEMENT

ಜಿಲ್ಲಾಡಳಿತ ಭವನಕ್ಕೂ ತಪ್ಪದ ಹಂದಿಕಾಟ!

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 6:26 IST
Last Updated 16 ಡಿಸೆಂಬರ್ 2013, 6:26 IST

ಬಾಗಲಕೋಟೆ: ‘ಮುಳುಗಡೆ’ ನಗರದ ಇತ್ತೀಚಿನ ಚಿತ್ರಣಗಳು ಬೆರಗುಗೊಳಿಸುವಂತಿವೆ. ಹಳೆನಗರ, ನವನಗರ ಮತ್ತು ವಿದ್ಯಾಗಿರಿಯಲ್ಲಿ ಜನಸಂಖ್ಯೆಗಿಂತ ಅಧಿಕವಾಗಿ ಕಂಡುಬರುವ ಬಿಡಾಡಿ ಹಂದಿಗಳು, ನಾಯಿಗಳು ಇದೀಗ ಜಿಲ್ಲಾಡಳಿತ ಭವನವನಕ್ಕೆ ದಾಂಗುಡಿ ಇಟ್ಟಿವೆ.

ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಸಲಾಗಿರುವ ಹೂವಿನಗಿಡಗಳನ್ನು ನಾಶ ಮಾಡಿವೆ. ನೌಕರರು ತಿಂದು ಬಿಸಾಡುವ ಎಂಜಲಿಗೆ ಮುತ್ತುತ್ತಿವೆ. ಪ್ಲಾಸ್ಟಿಕ್‌, ಕಾಗದ ಮತ್ತಿತರ ತ್ಯಾಜ್ಯವನ್ನು ಹರಡಿ ಇಡೀ ವಾತಾವರಣವನ್ನೇ ಮಲಿನ­ಗೊಳಿಸತೊಡಗಿವೆ.

ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಗೆ ಹೋಗುವ ಮಾರ್ಗದಲ್ಲಿ ಇರುವ ಕೊಳವೆಬಾವಿ ಇರುವ ಸ್ಥಳದಲ್ಲಿ ಸಂಗ್ರಹವಾಗುವ ನೀರಿನ ಗುಂಡಿಯಲ್ಲಿ ಹಂದಿಗಳು ಸ್ವಚ್ಛಂದವಾಗಿ ಮಲಗಿ ಕೆಸರಿನ ಗುಂಡಿ ಮಾಡಿವೆ.

ಜಿಲ್ಲಾಡಳಿತ ಭವನದ ಮುಂಭಾಗದ ಉದ್ಯಾನವನದಲ್ಲಿ ವಿಶ್ರಾಂತಿ ಪಡೆಯಲು ಬರುವ ಸಾರ್ವಜನಿಕರಿಗೆ ಹಂದಿ ಕಾಟದಿಂದ ಬೇಸರ ಬಂದೊದಗಿದೆ. ಹಂದಿ ಹಾವಳಿ ನಿಯಂತ್ರಿಸಲು ಆಗದೇ ಕಾವಲುಗಾರ ಕಂಗಾಲಾಗಿದ್ದಾನೆ. 

ಹೀಗೆ ಬಿಟ್ಟರೇ ಶೀಘ್ರದಲ್ಲೇ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಗಳ ಒಳಗೂ ಹಂದಿಗಳು ಪ್ರವೇಶಿಸಿದರೇ ಆಶ್ಚರ್ಯವಿಲ್ಲ!
ನಗರಸಭೆ ಸಿಬ್ಬಂದಿ ಈಗಲಾದರೂ ಎಚ್ಚೆತ್ತುಕೊಳ್ಳುವ ಮೂಲಕ ನಗರದಲ್ಲಿ ಹೆಚ್ಚಿರುವ ಹಂದಿಗಳ ನಿಗ್ರಹಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.