ADVERTISEMENT

ಜೈವಿಕ ಇಂಧನ: ಚಿಂತನೆಗೆ ಸರ್ಕಾರಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2014, 10:51 IST
Last Updated 28 ಫೆಬ್ರುವರಿ 2014, 10:51 IST
ಬಾದಾಮಿ ಸಮೀಪದ ಶಿವಯೋಗಮಂದಿರದಲ್ಲಿ ವಿಚಾರ ಸಂಕಿರಣ ಸಮಾರಂಭವನ್ನು ಕೋಡಿಹಳ್ಳಿ ಶಿವಾನಂದ ಶಿವಯೋಗೀಂದ್ರ ಶ್ರೀಗಳು ಉದ್ಘಾಟಿಸಿದರು. ನೀಲಕಂಠ ಶ್ರೀಗಳು, ಸಂಗನಬಸವ ಶ್ರೀಗಳು ಚಿತ್ರದಲ್ಲಿ ಇದ್ದಾರೆ.
ಬಾದಾಮಿ ಸಮೀಪದ ಶಿವಯೋಗಮಂದಿರದಲ್ಲಿ ವಿಚಾರ ಸಂಕಿರಣ ಸಮಾರಂಭವನ್ನು ಕೋಡಿಹಳ್ಳಿ ಶಿವಾನಂದ ಶಿವಯೋಗೀಂದ್ರ ಶ್ರೀಗಳು ಉದ್ಘಾಟಿಸಿದರು. ನೀಲಕಂಠ ಶ್ರೀಗಳು, ಸಂಗನಬಸವ ಶ್ರೀಗಳು ಚಿತ್ರದಲ್ಲಿ ಇದ್ದಾರೆ.   

ಬಾದಾಮಿ: ಹಲವಾರು ದಶಕಗಳಿಂದ ರಾಷ್ಟ್ರದಲ್ಲಿ ಇಂಧನದ ಸಮಸ್ಯೆಯಾಗಿದೆ. ಇಂಧನದ ದರ ಏರಿಕೆಯಿಂದ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಕೆ ಅಧಿಕವಾಗಿ ಜನತೆಗೆ ತೊಂದರೆ­ಯಾಗಿದೆ. ಇಂಧನದ ಉತ್ಪಾದನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರ್ಯಾಯ ವ್ಯವಸ್ಥೆ ಚಿಂತನೆ ಮಾಡಬೇಕಾಗಿದೆ ಎಂದು ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಮತ್ತು ಹೊಸಪೇಟೆ ಸಂಗನಬಸವ ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡಿದರು.

ಶಿವಯೋಗಮಂದಿರದಲ್ಲಿ ಕುಮಾರ ಶಿವಯೋಗಿಗಳ 84 ನೇ ಪುಣ್ಯಸ್ಮರಣೋತ್ಸವ ಮತ್ತು 104 ನೇ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಜರುಗಿದ
ಜೈವಿಕ ಇಂಧನದ ಅವಶ್ಯಕತೆ ವಿಚಾರ ಸಂಕಿರಣದ ಸಮಾರಂಭದಲ್ಲಿ ಅವರು ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಇಂಧನಕ್ಕಾಗಿಯೇ ಶೇ. 40 ರಷ್ಟು ಹಣವನ್ನು  ಮುಂಗಡ ಪತ್ರದಲ್ಲಿ ಕಾಯ್ದಿಡಬೇಕಾಗುತ್ತದೆ. ಶೇ. 80 ರಷ್ಟು ಬೇರೆ ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳ­ಬೇಕು. ದೇಶದಲ್ಲಿ ಶೇ. 20 ರಷ್ಟು ಮಾತ್ರ ಉತ್ಪಾದನೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಇಂಧನದ ಕೊರತೆಯಾಗುವ ಮುನ್ನ ಸರ್ಕಾರಗಳು ಜೈವಿಕ ಇಂಧನ ಉತ್ಪಾದನೆಯತ್ತ ಯೋಚಿಸಬೇಕಿದೆ ಎಂದು ಅವರು ಹೇಳಿದರು.

ಬಿದಾಯಿ ಭಾಗ್ಯ, ಅನ್ನಭಾಗ್ಯ ಮತ್ತು ಲ್ಯಾಪ್‌ಟಾಪ್‌ನಿಂದ ಬಡತನ ನಿವಾರಣೆಯಾಗುವುದಿಲ್ಲ. ಅಭಿವೃದ್ಧಿ ಯೋಜನೆಯತ್ತ ಸರ್ಕಾರ ಚಿಂತನೆ ಮಾಡಬೇಕು.
ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ ಇದು­ವರೆಗೂ ಅಧ್ಯಕ್ಷರ ನೇಮಕ ಮಾಡಲು ಅಗಿಲ್ಲ. ಸಮರ್ಥ ತಜ್ಞರನ್ನು ನೇಮಕ ಮಾಡಬೇಕು. ಸರ್ಕಾರ ರೈತರಿಗೆ ಟನ್‌ಗೆ ಕಬ್ಬಿನ ದರ ₨ 2500 ನಿಗದಿ ಮಾಡಲು ಆಗಿಲ್ಲ. ಸರ್ಕಾರ ರೈತರ ನೆರವಿಗೆ ಯಾಕೆ ಬರೋದಿಲ್ಲ ಎಂದು ಪ್ರಶ್ನಿಸುತ್ತ ಇದೊಂದು ನಪುಂಸಕ ಸರ್ಕಾರವಾಗಿದೆ ಎಂದು ವಿಷಾದಿಸಿದರು.

ಶಿವಯೋಗಮಂದಿರದ ಬೆಟ್ಟದಲ್ಲಿ ಜೈವಿಕ ಇಂಧನದ ಮರಗಳನ್ನು ಬೆಳೆಸಲು ಒಪ್ಪಿಗೆ ಕೊಡಲಾಗುವುದು. ಇಲ್ಲಿಯೇ ಇಂಧನ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲಿ ಎಲ್ಲ ಸಹಾಯ ಸಹಕಾರ ಕೊಡುವುದಾಗಿ ಸ್ವಾಮೀಜಿ ಹೇಳಿದರು. ಡಾ. ಪಿ. ರಮಣ, ಡಿ.ಕೆ. ಪಾಟೀಲ, ಶಂಕರಲಿಂಗ ಗೋಗಿ ಜೈವಿಕ ಇಂಧನ ಉತ್ಪಾದನೆಗೆ ರೈತರು ಹುಲಗಲಿ ಮತ್ತು ಬೇವಿನ ಮರ ಮತ್ತು ಲಕ್ಷ್ಮಿತರು ಮರಗಳನ್ನು ಬೆಳೆಸುವ ಕುರಿತು ಉಪನ್ಯಾಸ ನೀಡಿದರು.

ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಯೋಗಮಂದಿರದ ವಟುಗಳು, ಎಂ.ಬಿ. ಹಂಗರಗಿ, ಮುಕ್ಕಣ್ಣ ಜನಾಲಿ, ಸುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.