ADVERTISEMENT

ತೋಟಗಾರಿಕೆ ವಿಜ್ಞಾನ ಪದವಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ಬಾಗಲಕೋಟೆ: ರೈತರು ಮತ್ತು ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಇತ್ತೀಚಿನ ವರ್ಷದಲ್ಲಿ ತೋಟಗಾರಿಕಾ ವಿಜ್ಞಾನ ಪದವಿ ಅಧ್ಯಯನದತ್ತ ಯುವ ಸಮೂಹ ಆಸಕ್ತಿ ಬೆಳಸಿಕೊಳ್ಳತೊಡಗಿದ್ದಾರೆ.

ಬಾಗಲಕೋಟೆ ಕೇಂದ್ರಿತವಾಗಿ 2009ರಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆರಂಭವಾದ ಬಳಿಕ ತೋಟಗಾರಿಕೆ ವಿಜ್ಞಾನ ಪದವಿ ಅಧ್ಯಯನಕ್ಕೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳಲ್ಲಿ ಅದರಲ್ಲೂ ವಿದ್ಯಾರ್ಥಿನಿಯರಲ್ಲಿ ಆಸಕ್ತಿ ಹೆಚ್ಚಾಗತೊಡಗಿದೆ.

`ತೋಟಗಾರಿಕಾ ವಿಜ್ಞಾನ ಪದವಿಧರರಿಗೆ ವಿವಿಧ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗವಕಾಶ, ನರ್ಸರಿ ಆರಂಭಿಸಲು, ಬೀಜೋತ್ಪಾದನೆ, ಉತ್ಪನ್ನ ರಫ್ತಿಗೆ ಹೆಚ್ಚು ಅವಕಾಶ ಇರುವುದರಿಂದ ವಿದ್ಯಾರ್ಥಿಗಳು ಇತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ~ ಎಂದು ವಿ.ವಿ. ಕುಲಸಚಿವ ಡಾ. ಎ.ಬಿ.ಪಾಟೀಲ `ಪ್ರಜಾವಾಣಿ~ಗೆ ಶನಿವಾರ ತಿಳಿಸಿದರು.

`ನಾಲ್ಕು ವರ್ಷದ ಪದವಿ ಕೋರ್ಸ್ ಕೇವಲ 50 ರಿಂದ 60 ಸಾವಿರ ರೂಪಾಯಿ (ಸರ್ಕಾರಿ ಶುಲ್ಕ) ವೆಚ್ಚದಲ್ಲಿ ಮುಗಿಸಬಹುದಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆರ್ಥಿಕವಾಗಿ  ಹೊರಯಾಗದ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯಲು ಬಯಸುತ್ತಿದ್ದಾರೆ~ ಎಂದರು.

`ತೋಟಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟಿದೆ. ಅಲ್ಲದೇ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿರುವ ಕಾರಣ ಬಿ.ಎಸ್ಸಿ ತೋಟಗಾರಿಕಾ ಪದವಿಧರರಿಗೆ ಬೇಡಿಕೆ ಹೆಚ್ಚಳವಾಗತೊಡಗಿದೆ~ ಎಂದು ಹೇಳಿದರು.

`ವಿಶ್ವವಿದ್ಯಾಲಯ ಆರಂಭವಾದ ಬಳಿಕ ಈ ವರ್ಷ ದಾಖಲೆ ಪ್ರಮಾಣದಲ್ಲಿ ಅಂದರೆ, 2012-13ನೇ ಸಾಲಿನ ಬಿ.ಎಸ್ಸಿ ತೋಟಗಾರಿಕೆ ಪದವಿ ಪ್ರವೇಶಕ್ಕೆ ಆಯ್ಕೆ ಬಯಸಿ 2,700 ಅರ್ಜಿ ಬಂದಿವೆ~ ಎಂದು ತಿಳಿಸಿದರು.
ವಿಶ್ವವಿದ್ಯಾಲಯ ಆರಂಭವಾದ ಪ್ರಥಮ ವರ್ಷ ಅಂದರೆ 2009-10ನೇ ಶೈಕ್ಷಣಿಕ ಸಾಲಿನಲ್ಲಿ 210 ಸೀಟುಗಳಿಗೆ 400 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

2010-11ನೇ ಸಾಲಿನಲ್ಲಿ 360 ಪದವಿ ಸೀಟುಗಳಿಗೆ 1,750, 2011-12ನೇ ಸಾಲಿನಲ್ಲಿ 460 ಸೀಟುಗಳಿಗೆ 2,150 ಅರ್ಜಿಗಳು ಬಂದಿದ್ದವು~ ಎಂದರು.

ರೈತರ ಮಕ್ಕಳಿಗೆ ಮೀಸಲು: `ರಾಜ್ಯ ಮತ್ತು ದೇಶದ ಬೇರಾವ ವಿಶ್ವವಿದ್ಯಾಲಯದಲ್ಲೂ ರೈತರ ಮಕ್ಕಳಿಗೆ ಶೈಕ್ಷಣಿಕ ಮೀಸಲು ಇಲ್ಲ. ಆದರೆ ಈ  ವಿಶ್ವವಿದ್ಯಾಲಯದಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ 23.8 ರಷ್ಟು ಸೀಟು ಕಾಯ್ದಿರಿಸಲಾಗಿದೆ~ ಎಂದು ತಿಳಿಸಿದರು.

ಕೌನ್ಸೆಲಿಂಗ್ ನಾಳೆಯಿಂದ
ಬಾಗಲಕೋಟೆ: ಇದೇ 16 ರಿಂದ 19ರವರೆಗೆ ಬಾಗಲಕೋಟೆ ನವನಗರದ ಸೆಕ್ಟರ್ ನಂ.37ರಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿ.ಎಸ್ಸಿ. ತೋಟಗಾರಿಕಾ ಪದವಿಗೆ ಕೌನ್ಸೆಲಿಂಗ್ ನಡೆಯಲಿದೆ.

ಅರ್ಹ ಅಭ್ಯರ್ಥಿಗಳ ರ‌್ಯಾಂಕಿಂಗ್ ಪಟ್ಟಿಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಆಯಾ ದಿನದ ಕೌನ್ಸೆಲಿಂಗ್ ಮುಗಿದ ನಂತರ ಮರುದಿನ ಕೌನ್ಸೆಲಿಂಗ್‌ಗೆ ಲಭ್ಯವಿರುವ ಸೀಟುಗಳ ವಿವರಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ www.uhsbagalkot.edu.in  ಹಾಕಲಾಗುತ್ತದೆ. ಸೀಟುಗಳ ಲಭ್ಯತೆಯನ್ನು ಅರಿತು ವಿದ್ಯಾರ್ಥಿಗಳು ಕೌನ್ಸೆಲಿಂಗ್ ಬರಬೇಕೆಂದು ಕುಲಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT