ADVERTISEMENT

ದುರ್ಗಾದೇವಿ ಮೂರ್ತಿ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 9:10 IST
Last Updated 16 ಅಕ್ಟೋಬರ್ 2012, 9:10 IST

ಬಾಗಲಕೋಟೆ: ನೀಲಾನಗರದಲ್ಲಿ ಮಂಗಳವಾರ ನಡೆಯಲಿರುವ ದುರ್ಗಾದೇವಿ ಮಂದಿದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ  ಸೋಮವಾರ ನಗರದಲ್ಲಿ ದುರ್ಗಾದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.

ಸ್ಥಳೀಯ ವಲ್ಲಭಭಾಯಿ ಚೌಕದಲ್ಲಿರುವ ದುರ್ಗಾದೇವಿ ಮಂದಿರದಿಂದ ಮೆರವಣಿಗೆ ಆರಂಭವಾಯಿತು. ಸಕಲವಾದ್ಯ ವೈಭವ ಹಾಗೂ ಮಹಿಳೆಯರ ಕುಂಭಮೇಳದೊಂದಿಗೆ ಆರಂಭವಾದ ಮೆರವಣಿಗೆಯು ಎಂ.ಜಿ.ರಸ್ತೆ, ಬಸವೇಶ್ವರ ಸರ್ಕಲ್, ದುರ್ಗಾವಿಹಾರ ರಸ್ತೆ ಮೂಲಕ  ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶಿರೂರ ಗ್ರಾಮದ ಮೂಲಕ ನೀಲಾನಗರ ತಲುಪಿತು.

ಮೂರ್ತಿಯ ಮೆರವಣಿಗೆಯ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯರು ಪಾಲ್ಗೊಂಡಿದ್ದರು. ಲಂಬಾಣಿ ಉಡುಗೆ ತೊಟ್ಟ ಮಹಿಳೆಯರ ಸಾಂಪ್ರದಾಯಿಕ ನೃತ್ಯ ಎಲ್ಲರ ಗಮನ ಸೆಳೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕಲಾತಂಡಗಳ ಮೆರವಣಿಗೆ ಆಕರ್ಷಕವಾಗಿತ್ತು.

ಮಹಿಳೆಯರು, ಯುವಕರು, ಮಕ್ಕಳು ಮೆರವಣಿಗೆಯ ಉದ್ದಕ್ಕೂ ಕುಣಿದು ಕುಪ್ಪಳಿಸಿದರು. ಮೆವಣಿಗೆ ಸಾಗುವಾಗ ಪ್ರಮುಖ ಸ್ಥಳಗಳಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮಂದಿರ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಊರ ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಎದುರು ರಂಗೋಲಿ ಹಾಕಿ, ತಳಿರುತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ವಿವಿಧೆಡೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಕುಮಾರ ಮಹಾರಾಜರು, ಜಿಲ್ಲಾ ಪಂಚಾಯಿತಿ ಸದಸ್ಯ ಹೂವಪ್ಪ ರಾಠೋಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಗಪ್ಪ ಗೌಡರ, ನೀಲಾನಗರದ ಘಣಿಯಪ್ಪ ಕಾರಭಾರಿ, ಕೇಶಪ್ಪ ಗಚ್ಚಿನಮನಿ, ನಾಗೇಶ ಪೂಜಾರಿ, ವಾಲಪ್ಪ ಕಟ್ಟೀಮನಿ, ರಮೇಶ ಪೂಜಾರಿ ನೇತೃತ್ವದಲ್ಲಿ  ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.