ADVERTISEMENT

ಧರಣಿಗೆ ಸಂಘ ಪರಿವಾರ ಬೆಂಬಲ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 9:10 IST
Last Updated 7 ಜೂನ್ 2011, 9:10 IST
ಧರಣಿಗೆ ಸಂಘ ಪರಿವಾರ ಬೆಂಬಲ
ಧರಣಿಗೆ ಸಂಘ ಪರಿವಾರ ಬೆಂಬಲ   

ಬಾಗಲಕೋಟೆ: ಭ್ರಷ್ಟಾಚಾರ ವಿರೋಧಿಸಿ ಯೋಗಗುರು ರಾಮದೇವ್ ಬಾಬಾ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸಂಘ ಪರಿವಾರ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ನಗರದ ಹೊಳೆ ಆಂಜನೇಯ ದೇವಸ್ಥಾನದ ಬಳಿ ಭಾರತ ಸ್ವಾಭಿಮಾನ ಟ್ರಸ್ಟ್ ಆಶ್ರಯದಲ್ಲಿ ಬಾಬಾ ಬೆಂಬಲಿಗರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ಸಂಘ ಪರಿವಾರದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಸೋಮವಾರ ಭಾಗವಹಿಸಿದರು.

ಬಾಬಾ ನಡೆಸುತ್ತಿರುವ ನಿರಶನವನ್ನು ಭಂಗಗೊಳಿಸಿದ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ಕ್ರಮವನ್ನು ಖಂಡಿಸಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಮುಖಂಡ ಸಂಗಣ್ಣ ಕುಪ್ಪಸ್ತ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ.ಸಿ.ಎಸ್.ಪಾಟೀಲ, ಹಿಂದೂ ಜಾಗರಣ ವೇದಿಕೆಯ ಅಶೋಕ ಮುತ್ತಿನಮಠ ಹಾಗೂ ನಗರಸಭೆ ಸದಸ್ಯ ಜಯಂತ ಕುರಂದವಾಡ, ಭ್ರಷ್ಟಾಚಾರ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳಬೇಕಾದ ಸರ್ಕಾರವು ಭ್ರಷ್ಟಾಚಾರ ವಿರೋಧಿಗಳ ಹೋರಾಟವನ್ನು ಭಂಗಗೊಳಿಸಲು ಹುನ್ನಾರ ನಡೆಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಿಟಿಡಿಎ ಸದಸ್ಯ ಸಂತೋಷ ಹೊಕ್ರಾಣಿ, ನಗರಸಭೆ ಸದಸ್ಯರಾದ ಯಲ್ಲಪ್ಪ ಬೆಂಡಿಗೇರಿ, ಭಾಗ್ಯಶ್ರೀ ಹಂಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕೊಠಾರಿ, ಭಾರತ ಸ್ವಾಭಿಮಾನ ಟ್ರಸ್ಟಿನ ಜಿಲ್ಲಾ ಪ್ರಭಾರಿ ಶಶಿಕಾಂತ ದೇವಳೆ, ಪದಾಧಿಕಾರಿಗಳಾದ ಡಾ.ಮಾನೆ, ಗುರುರಾಜ್ ಜೋಶಿ, ಬಿ.ಎಸ್. ಕಟಗೇರಿ, ಮಧುಮಿತಾ ಮಾಲಪಾಣಿ, ಡಾ.ಜಯಶ್ರೀ ತೆಲಸಂಗ ಸೇರಿದಂತೆ ಅನೇಕ ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.