ADVERTISEMENT

ನಿವೃತ್ತರಿಗೆ ನೆಮ್ಮದಿಯುತ ಬದುಕು ಕಲ್ಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 6:55 IST
Last Updated 5 ಫೆಬ್ರುವರಿ 2011, 6:55 IST

ಬಾಗಲಕೋಟೆ: ಎಂಬತ್ತು ವಸಂತಗಳನ್ನು ಪೂರೈಸಿದ ನಿವೃತ್ತ ನೌಕರರನ್ನು ಜಿಲ್ಲಾ ನಿವೃತ್ತ ನೌಕರರ ಸಂಘದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ‘ನಿವೃತ್ತರು ಅನೇಕ ಗೊಂದಲಗಳಿಗೆ ಸಿಲುಕಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಬದುಕಿನ ಮುಸ್ಸಂಜೆಯಲ್ಲಿ ಅವರಿಗೆ ನೆಮ್ಮದಿಯುತ ಬದುಕು ಕಲ್ಪಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದರು.

ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ‘ಸಾಂಸ್ಕೃತಿಕ ಬದುಕಿನಿಂದ ವಿಮುಖಗೊಳ್ಳುತ್ತಿರುವ ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಅತಿಥಿ ಉಪನ್ಯಾಸ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ಧರಾಮ ಮನಹಳ್ಳಿ, ‘ನಮ್ಮ ಬದುಕು ರೂಪಿಸಿದ ತಂದೆ-ತಾಯಿಯನ್ನು ಗೌರವಿಸಿದರೆ ಅಂತಹದೇ ಗೌರವಕ್ಕೆ ನಾವೂ ಪಾತ್ರರಾಗುತ್ತೇವೆ’ ಎಂದರು.

94 ವಸಂತಗಳನ್ನು ಪೂರೈಸಿರುವ ತಮ್ಮ ತಾಯಿಯನ್ನು ನೆನಪಿಸಿಕೊಂಡ ಅವರು, ನಾವು ತಂದೆ-ತಾಯಿಯನ್ನು ಗೌರವಿಸದ ಹೊರತು ನಮ್ಮ ಮಕ್ಕಳಿಂದ ಗೌರವ ಪಡೆಯುವುದು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಟೀಕಿನಮಠದ ರೇವಣಸಿದ್ದೇಶ್ವರ ಸ್ವಾಮಿ ಆಶೀರ್ವಚನ ನೀಡಿದರು. 80 ವಸಂತ ಪೂರೈಸಿದ 30 ಜನರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಎಸ್.ಜಿ. ಪಾಟೀಲ, ಸಹ ಕಾರ್ಯದರ್ಶಿ ಎಸ್.ಅವ್ವಣ್ಣವರ, ಎಂ.ಎನ್. ಮುಪ್ಪಯ್ಯನವರ ಮತ್ತಿತರರು ಹಾಜರಿದ್ದರು.ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಬಿ. ಗೋವಿಂದಪ್ಪನವರ ಸ್ವಾಗತಿಸಿದರು. ಗುರುಸ್ವಾಮಿ ಗಣಾಚಾರಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಪಿ.ವೈ. ಗಿರಿಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿ.ಜಿ.ಅಂಗಡಿ ಶಾಸಕರಿಗೆ ಮನವಿಪತ್ರ ಸಲ್ಲಿಸಿದರು. ಎಂ.ಡಿ.ಕಿತ್ತಲಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಎಂ.ಎಸ್. ಪಾರ್ಸಿ ದಾನಿಗಳನ್ನು ಅಭಿನಂದಿಸಿದರು. ಎಸ್.ಆರ್. ಗಡ್ಡಿ ಹಾಗೂ ಎಂ.ಬಿ. ಹೂಗಾರ ನಿರೂಪಿಸಿದರು. ಎಂ.ಎಸ್. ಕುಬಕಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.