ADVERTISEMENT

ನ್ಯಾಯಾಂಗದಲ್ಲಿ ಕನ್ನಡ ಅನುಷ್ಠಾನ : ಸಜ್ಜನರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 6:25 IST
Last Updated 14 ಸೆಪ್ಟೆಂಬರ್ 2011, 6:25 IST

ಹುನಗುಂದ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ನ್ಯಾಯಾಂಗದಲ್ಲಿ ಕನ್ನಡ ಅನುಷ್ಠಾನ ಯೋಜನೆಯಲ್ಲಿ ತಾಲ್ಲೂಕು ಪ್ರಧಾನ ದಿವಾಣಿ ನ್ಯಾಯಾಧೀಶ ಶರಣಪ್ಪ ಸಜ್ಜನ ಅವರು ತಮ್ಮ ಸೇವೆಯಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ಪರಿಣಾಮ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ಬೆಂಗಳೂರಿನಲ್ಲಿ ಈಚೆಗೆ ಗೌರವಿಸಲಾಯಿತು. ಆ ನಿಮಿತ್ತ ಮಂಗಳವಾರ ನ್ಯಾಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶೆ ಕಾವೇರಿ ಕಲ್ಮಠ ಅವರು ಶರಣಪ್ಪ ಅವರನ್ನು ಸನ್ಮಾನಿಸಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜೆ. ರಾಮವಾಡಗಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲರಾದ ಆರ್. ಎಲ್. ಸುರಪುರ, ಎಸ್.ಎಂ.ದೇಸಾಯಿ, ಎಸ್.ಎಸ್. ತಾರಿವಾಳ, ವಿ.ಆರ್.ಜನಾದ್ರಿ, ವಿ.ಎಸ್.ದಾದ್ಮಿ, ಪಿ.ಆರ್.ಪೂಜಾರ, ಸಂತೋಷ ರಾಂಪೂರ, ಸಂಘದ ಪದಾಧಿಕಾರಿಗಳಾದ ಬಿ.ಎ.ಆವಟಿ, ಗಿರೀಶ ಕೆ.ಎನ್. ಮತ್ತು ವಿ.ಬಿ. ದಮ್ಮೂರಮಠ ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟಕ್ಕೆ ಆಯ್ಕೆ: ಹುನಗುಂದದಲ್ಲಿ ಈಚೆಗೆ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಬೇವಿನಮಟ್ಟಿ ಸರಕಾರಿ ಪ್ರೌಢಶಾಲೆ ಮಕ್ಕಳಾದ ನೀಲಮ್ಮ ಮನಗೂಳಿ, ಆನಂದಕುಮಾರ ಹುಬ್ಬಳ್ಳಿ, ತಿಪ್ಪವ್ವ ಬೇವಿನಮಟ್ಟಿ, ಅನ್ನಪೂರ್ಣ ಹಿರೇಮಠ, ಪದ್ಮಾವತಿ ತೆಗ್ಗಿನಮನಿ, ಸುರೇಶ ತೆಗ್ಗಿನಮನಿ, ವಿನೋದ ಚಲವಾದಿ, ಬಸವರಾಜ ಗೌಡರ ಮತ್ತು ಅನೀಲ ಪಿಡ್ರಾತರ ಪ್ರಥಮ ಬಂದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಮಕ್ಕಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕ ಎ.ಎಚ್. ನದಾಫ್ ಅವರನ್ನು ಎಸ್.ಡಿ.ಎಂ.ಸಿ. ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

ವಚನ ಪ್ರವಚನ ಮುಕ್ತಾಯ ನಾಳೆ

ತಾಲ್ಲೂಕಿನ ಅಮೀನಗಡ ಶ್ರೀ ಪ್ರಭುಶಂಕರೇಶ್ವರ ಮಠದಲ್ಲಿ ರಾಜಗುರು ಪ್ರಭುರಾಜೇಂದ್ರ ಸ್ವಾಮಿಗಳ 97 ನೇ ಜಯಂತ್ಯುತ್ಸವ ಹಾಗೂ ವಚನ ಪ್ರವಚನ ಮುಕ್ತಾಯ ಸಮಾರಂಭ 15 ರಂದು ಗುರುವಾರ ಮುಂಜಾನೆ 10 ಕ್ಕೆ ನಡೆಯುವುದು. ಹಾಲಕೆರೆ ಅಭಿನವ ಅನ್ನದಾನ ಸ್ವಾಮಿಗಳು ಮತ್ತು ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಸ್ವಾಮಿಗಳ ದಿವ್ಯಸಾನಿಧ್ಯ, ಸುವರ್ಣಗಿರಿ ಸಿದ್ಧಲಿಂಗ ಸ್ವಾಮಿಗಳು ಸಾನಿಧ್ಯ, ಶಂಕರರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ, ಕಮತಗಿ ಹುಚ್ಚೇಶ್ವರ ಸ್ವಾಮಿಗಳು ನೇತೃತ್ವ ಹಾಗೂ ಮುನವಳ್ಳಿ ಮುರುಘೇಂದ್ರ ಸ್ವಾಮಿಗಳು ಮತ್ತು ಜಂಬಗಿ ಅಡವೀಶ್ವರ ಸ್ವಾಮಿಗಳು ಸಮ್ಮುಖ ವಹಿಸುವರು.

ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಎಸ್. ಆರ್. ಪಾಟೀಲ, ನಾರಾಯಣಸಾ ಭಾಂಡಗೆ, ಮಹಾಂತೇಶ ಕೌಜಲಗಿ ಹಾಗೂ ಅರುಣ ಶಹಾಪುರ ಮುಖ್ಯ ಅತಿಥಿಗಳಾಗಿ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನವರ ಅತಿಥಿಯಾಗಿ ಆಗಮಿಸುವರೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ಕ್ರಿಕೆಟ್ ತಂಡಕ್ಕೆ ಕಿಶನ್ ಆಯ್ಕೆ
ಜಿಲ್ಲಾ ಮಟ್ಟದಲ್ಲಿ ನಡೆದ ಪ್ರೌಢಶಾಲಾ ಹಂತದ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ಹುನಗುಂದ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಿಶನ್ ಪಟೇಲ್ ಬೆಳಗಾವಿ ವಿಭಾಗ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ.

ವಿದ್ಯಾರ್ಥಿ ಹಾಗೂ ತರಬೇತಿದಾರ ಕೆ.ಡಿ. ಕಂಬಾಳಿಮಠರನ್ನು ಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.