ADVERTISEMENT

ಪ್ರಜೆಗಳೇ ರಾಷ್ಟ್ರದ ಮಾಲೀಕರು

ಗಣರಾಜ್ಯೋತ್ಸವ ಸಂಭ್ರಮ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್‌. ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2016, 7:33 IST
Last Updated 27 ಜನವರಿ 2016, 7:33 IST
ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಸಚಿವ ಎಸ್‌.ಆರ್‌.ಪಾಟೀಲ ಗೌರವ ವಂದನೆ ಸ್ವೀಕರಿಸಿದರು
ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಸಚಿವ ಎಸ್‌.ಆರ್‌.ಪಾಟೀಲ ಗೌರವ ವಂದನೆ ಸ್ವೀಕರಿಸಿದರು   

ಬಾಗಲಕೋಟೆ: ‘ಜನಪ್ರತಿನಿಧಿಗಳು ಜನ­ತೆಯ ಸೇವಕರೇ ಹೊರತು ಮಾಲೀ­ಕರಲ್ಲ, ಜನರೇ ಜನಪ್ರತಿನಿಧಿಗಳ ಮಾಲೀಕ­­ರಾಗಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣ­ದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 67ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ದೇಶದ ಸಾರ್ವಭೌಮತ್ವ ರಕ್ಷಣೆಗೆ ಜನಪ್ರತಿನಿಧಿಗಳು ಕಾಯ, ವಾಚ, ಮನಸ್ಸಿನಿಂದ ಶ್ರಮಿಸಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ’ ಎಂದರು.
‘ದೇಶದ ಚುಕ್ಕಾಣಿ ಹಿಡಿದ ನಾಯ­ಕರು ಭ್ರಷ್ಟಾಚಾರ, ಕೋಮು­ವಾದ­ದಂತಹ ಸವಾಲುಗಳನ್ನು ದಿಟ್ಟ­ವಾಗಿ ಎದುರಿಸಬೇಕು. ರಾಷ್ಟ್ರದ ಅಭಿವೃದ್ಧಿಗೆ ಅರ್ಪಣೆ ಮಾಡಿಕೊಳ್ಳಬೇಕು’ ಎಂದರು.

‘ವೈವಿಧ್ಯತೆಯಲ್ಲಿ ಐಕ್ಯತೆಯನ್ನು ಎತ್ತಿಹಿಡಿದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಸಾಮರಸ್ಯದ ಬದುಕಿಗೆ ಹೇಳಿ ಮಾಡಿಸಿದ ದೇಶ ಭಾರತ. ಸಂವಿಧಾನಕ್ಕೆ ಬದ್ಧರಾಗಿ ನಡೆಯುತ್ತಿರುವುದೇ ಭಾರತೀ­ಯರ ವಿಶಿಷ್ಟ ಗುಣ’ ಎಂದರು.

‘ದೇಶಕ್ಕೆ ಎದುರಾದ ಸವಾಲು ಹಾಗೂ ಸಮಸ್ಯೆಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸೌಹಾರ್ದ ಮಾತುಕತೆಯ ಮೂಲಕ ಪರಿಹಾರ ಕಂಡು­ಕೊಳ್ಳು­ವುದು. ವರ್ತಮಾನದಲ್ಲಿ ನಿಂತು ಭೂತ­ಕಾಲವನ್ನು ನೆನೆಯುತ್ತ ಭವಿಷ್ಯವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಕಟ್ಟಿಕೊಳ್ಳು­ವುದು ಭಾರತೀಯರೆಲ್ಲರ ಮನೋ­ಭಾವವಾಗಿದೆ’ ಎಂದರು.

‘ಸತ್ಯ, ಶಾಂತಿ, ಅಹಿಂಸೆಗಳೆಂಬ ಅಸ್ತ್ರಗಳನ್ನು ಬಳಸಿ ಬ್ರಿಟಿಷರು ಈ ದೇಶದಿಂದ ಹೋಗುವಂತೆ ಮಾಡಿದ ಮಹಾತ್ಮ ಗಾಂಧೀಜಿಯವರ ನೇತೃತ್ವ­ದಲ್ಲಿ ನಡೆದ ಸ್ವಾತಂತ್ರ ಹೊರಾಟಗಾರರ ತ್ಯಾಗಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ದೇಶಕಟ್ಟುವ ಕೆಲಸದಲ್ಲಿ ಗಾಂಧೀಜಿ, ನೆಹರೂ, ಸರ್ದಾರ್‌ ಪಟೇಲ್‌, ಡಾ.ಬಿ.ಆರ್.ಅಂಬೇಡ್ಕರ್‌ ಅವರು ಹಾಕಿಕೊಟ್ಟ ಪರಂಪರೆ, ತತ್ವ, ಸಿದ್ಧಾಂತ ನಮಗೆ ಸ್ಫೂರ್ತಿಯಾಗಬೇಕು’ ಎಂದರು. ‘ದೇಶದ ಪ್ರಗತಿ, ಅಭಿವೃದ್ಧಿಗಾಗಿ ಹೋರಾಟ ಮಾಡುವುದು ನಮ್ಮ ದೃಢ ಸಂಕಲ್ಪವಾಗಬೇಕು. ಯುವಕರಿಗೆ ನಮ್ಮ ಪೂರ್ವಜರ ಬದುಕು ದಾರಿದೀಪವಾಗ ಬೇಕು’ ಎಂದರು.

ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ.ಸಿ.ಗದ್ದಿಗೌಡರ, ಜಿ.ಪಂ.ಅಧ್ಯಕ್ಷ ಬಸವಂತಪ್ಪ ಮೇಟಿ, ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ನಗರ ಯೋಜನಾ ಪ್ರಾಧಿ­ಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿ­ಡಿಎ ಅಧ್ಯಕ್ಷ ಎ.ಡಿ.­ಮೊಕಾಶಿ, ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಬಿ.­ಸೌದಾಗರ, ಜಿಲ್ಲಾಧಿಕಾರಿ ಪಿ.ಎ.ಮೇಘ­ಣ್ಣ­ವರ, ಎಸ್ಪಿ ಎಂ.ಎನ್.­ನಾಗರಾಜ, ಜಿ.ಪಂ ಸಿಇಓ ಎಂ.ಜಿ.ಹಿರೇಮಠ ಇದ್ದರು. ಪ್ರಾರಂಭದಲ್ಲಿ ಪೊಲೀಸ್ ಪಡೆ, ಗೃಹ ರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಹಾಗೂ ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಳಿಕ  ವಿವಿಧ ಶಾಲಾ ಮಕ್ಕಳು  ನೃತ್ಯರೂಪಕ ಸಾಂಸ್ಕೃತಿಕ ನಡೆಸಿಕೊಟ್ಟರು.

ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಸಪ್ಪ ಹೆಬ್ಬಾಳ (ಸಂಗೀತ), ಶೇಖ್‌ಷಾ­ವಲಿ ಮುದ್ದೇಬಿಹಾಳ, ವೆಂಕಣ್ಣ ಕೆಂಗಲ­ ಗುತ್ತಿ (ಸೈಕ್ಲಿಂಗ್), ರಾಘವೇಂದ್ರ ಘಣಿ (ಬಾಸ್ಕೆಟ್ ಬಾಲ್), ಶಾಂತೇಶ ಚವ್ಹಾಣ (ಕರಾಟೆ), ಮಂಜುನಾಥ ಬೀಳಗಿ (ಕ್ರೀಡೆ), ವಿಜಯ ಪವಾರ (ಕಲೆ), ಎಸ್.ಎಚ್.ಹತ್ತಿ, ಎಸ್.ಜಿ.­ಖೋತ (ಶಿಕ್ಷಣ), ಭೀಮಪ್ಪ ದಾನಗೌಡ (ಜಾನ­ಪದ), ಮಹಾಂತೇಶ ಯಂಕಂಚಿ, ಸುವರ್ಣ ನಾಗರಾಳ (ಸಾಮಾಜಿಕ ಸೇವೆ), ರಾಜು ಗವಳಿ, ರಾಮು ಕಾಡಾ­ಪೂರ (ಪತ್ರಿಕಾರಂಗ) ಅವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಪ್ರದಾನ: ‘ಸವೋತ್ತಮ ಸೇವಾ ಪ್ರಶಸ್ತಿ’ಗೆ ಭಾಜನರಾದ ಕ್ಷೇತ್ರ ಶಿಕ್ಷಣಾ­ಧಿಕಾರಿ ಎನ್.ಬಿ.ಗೊರವರ, ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ವೈದ್ಯಾಧಿಕಾರಿ ಡಾ.ಎಚ್.­ವಿಜಯ­ಕುಮಾರ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯ­ಕ್ರಮ ಸಹಾಯಕ ಎಸ್.ಸಿ.­ಅಂಗಡಿ, ಸಾರ್ವಜನಿಕ ಶಿಕ್ಷಣ ಇಲಾ­ ಖೆಯ ಪತ್ರಾಂಕಿತ ವ್ಯವಸ್ಥಾಪಕ ಬಿ.ಜಿ.­ದಾಸರ, ಜಮಖಂಡಿ ಕ್ಷೇತ್ರ ಶಿಕ್ಷಣಾ­ ಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಎಚ್.ವೈ.ಜರಾಳಿ ಹಾಗೂ ಡಿ.ಸಿ. ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕ ಎಂ.ಬಿ.ಗುಡೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದೇಶ ನಮಗಾಗಿ ಏನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದರ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು
– 
ಎಸ್.ಆರ್‌.ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.