ಬಾದಾಮಿ: ‘ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಮತ್ತು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಾದಾಮಿ ಕ್ಷೇತ್ರದಿಂದ ಬಿ. ಶ್ರೀರಾಮುಲು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ. ಇದಕ್ಕಾಗಿ ಹೋರಾಡುತ್ತೇವೆ’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಇಲ್ಲಿನ ಬ್ಯಾಂಕಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ‘ಪಕ್ಷದ ವರಿಷ್ಠರು ತೀರ್ಮಾನಿಸಿದಂತೆ ಬಾದಾಮಿ ಕ್ಷೇತ್ರಕ್ಕೆ ಶ್ರೀರಾಮುಲು ನಾಮಪತ್ರವನ್ನು ಸಲ್ಲಿಸಿದ್ದಾರೆ. ಎಲ್ಲ ಮುಖಂಡರು ಒಗ್ಗಟ್ಟಾಗಿ ಶ್ರೀರಾಮುಲು ಗೆಲುವಿಗೆ ತಂತ್ರ ರೂಪಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಲು ಖಚಿತ’ ಎಂದರು.
‘ಸಿದ್ದರಾಮಯ್ಯ ವೀರಶೈವ ಲಿಂಗಾಯತ ಧರ್ಮವನ್ನು ಬೇರ್ಪಡಿಸಿದ್ದಾರೆ. ಬಾದಾಮಿ ಮತಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಎಲ್ಲರೂ ಒಂದೇ ಇದ್ದಾರೆ. ಈ ಎಲ್ಲ ಮತಗಳು ಬಿಜೆಪಿಗೆ ಬರಲಿವೆ’ ಎಂದು ತಾಲ್ಲೂಕು ಘಟಕದ ಬಿಜೆಪಿ ಅಧ್ಯಕ್ಷ ಎಸ್.ಟಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ್ ಶೀಲವಂತ, ಮಹಾಂತೇಶ ಮಮದಾಪೂರ, ನಾರಾಯಣಸಾ ಭಾಂಡಗೆ, ಮೇಲ್ಮನೆ ಸದಸ್ಯ ಅರುಣ ಶಹಾಪೂರ, ಬಿ.ಪಿ. ಹಳ್ಳೂರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಆಸಂಗೆಪ್ಪ ನಕ್ಕರಗುಂದಿ, ಶರಣಬಸಪ್ಪ ಹಂಚಿನಮನಿ, ಎ.ಎಸ್. ಪೀರಜಾದೆ, ಮುಕ್ಕಣ್ಣ ಜನಾಲಿ, ಪ್ರಮೋದ ಕವಡಿಮಟ್ಟಿ, ನಾಗರಾಜ ಕಾಚಟ್ಟಿ, ಮಹಾಗುಂಡಪ್ಪ ಮಣ್ಣೂರ, ರೆಹಮಾನ ಕೆರಕಲಮಟ್ಟಿ ಮೊದಲಾದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.