ADVERTISEMENT

ಫಲಾನುಭವಿ ಖಾತೆಗೆ ಸರ್ಕಾರದ ನೆರವು

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 11:20 IST
Last Updated 14 ಜೂನ್ 2017, 11:20 IST
ಬಾಗಲಕೋಟೆಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆದ ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಸಮ್ಮೇಳನವನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಉದ್ಘಾಟಿಸಿದರು
ಬಾಗಲಕೋಟೆಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆದ ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಸಮ್ಮೇಳನವನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಉದ್ಘಾಟಿಸಿದರು   

ಬಾಗಲಕೋಟೆ: ‘ಎಲ್ಲಾ ಸರ್ಕಾರಿ ಯೋಜನೆಗಳ ನೆರವು ಎಲ್ಲಿಯೂ ಸೋರಿಕೆಯಾಗದಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುವಂತೆ ಮಾಡಿದ ಶ್ರೇಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ’ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು.

ಇಲ್ಲಿನ ಕಲಾಮಂದಿರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಂಗಳವಾರ ಆಯೋಜಿಸಿದ್ದ ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ 28 ಕೋಟಿ ಬಡವರಿಗೆ ಬ್ಯಾಂಕ್ ಖಾತೆಗಳನ್ನು ಒದಗಿಸಿ ಪ್ರಧಾನಿ ಅವರ ನೆರವಿಗೆ ನಿಂತಿದ್ದಾರೆ ಎಂದರು.

ಹವಾಲಿ ಚಪ್ಪಲಿ ಹಾಕುವವರೂ ವಿಮಾನದಲ್ಲಿ ಓಡಾಟ ನಡೆಸಬೇಕು ಎಂಬ ಕನಸನ್ನು ಪ್ರಧಾನಿ ಹೊಂದಿದ್ದಾರೆ. ಅದೇ ಕಾರಣಕ್ಕೆ ಬಡವರ ಉದ್ಧಾರಕ್ಕೆ ಹಗಲು–ರಾತ್ರಿ ಶ್ರಮಿಸುತ್ತಿದ್ದಾರೆ. ದಿನಕ್ಕೆ 18 ತಾಸು ಕೆಲಸ ಮಾಡುವ ಅವರು ನಿರಂತರವಾಗಿ ಶ್ರಮಿಕರ ಅಭ್ಯುದಯಕ್ಕೆ ಮುಂದಾಗಿದ್ದಾರೆ. ಹೆಡ್‌ಮಾಸ್ಟರ್ ರೀತಿ ನಮ್ಮನ್ನೂ ಕೆಲಸಕ್ಕೆ ಹಚ್ಚಿದ್ದಾರೆ. ಅವರ ಸಂಪುಟದಲ್ಲಿ ನಾನು ಮಂತ್ರಿಯಾಗಿ ರುವುದು ಹೆಮ್ಮೆಯ ವಿಚಾರ ಎಂದರು.

ADVERTISEMENT

ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದಿನಕ್ಕೆ 2 ಕಿ.ಮೀ ದೂರ ಹೆದ್ದಾರಿ ನಿರ್ಮಾಣ ಆಗುತ್ತಿತ್ತು. ಈಗ ಅದು 130 ಕಿ.ಮೀಗೆ ಹೆಚ್ಚಳಗೊಂಡಿದೆ. ಮೋದಿ ಸರ್ಕಾರದ ಅಭಿವೃದ್ಧಿ ವೇಗ ಇದೇ ರೀತಿ ಮುಂದುವರೆದರೆ ದೇಶ ವಿಶ್ವಕ್ಕೆ ಗುರುವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.

70 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದಲಿತರ ಅಭ್ಯುದಯಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸಿದ ಜಿಗಜಿಣಗಿ, ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಮಾಡಿಕೊಂಡು ಆಳ್ವಿಕೆ ನಡೆಸಿದ ಆ ಪಕ್ಷ ಡಾ.ಬಿ.ಆರ್.ಅಂಬೇಡ್ಕರ್ ಸಾವಿಗೀಡಾದಾಗ ಅವರನ್ನು ಹೂಳಲು ದೆಹಲಿಯಲ್ಲಿ ಆರು ಅಡಿ ಜಾಗ ಕೊಡಲಿಲ್ಲ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ ಮಾತನಾಡಿ, ಮೇಕ್ ಇನ್ ಇಂಡಿಯಾ ಮಂತ್ರದ ಮೂಲಕ ಜಗತ್ತಿನ ದೊಡ್ಡಣ್ಣ ಅಮೆರಿಕಾಗೆ ಪ್ರಧಾನಿ ಮೋದಿ ಪಾಠ ಹೇಳಿದ್ದಾರೆ. ಅಲ್ಲಿನ ಅಧ್ಯಕ್ಷ ಟ್ರಂಪ್ ಕೂಡ ಚುನಾವಣಾ ಪ್ರಚಾರದಲ್ಲಿ ಮೋದಿ ಅವರನ್ನು ಅನುಕರಿಸಿ ಸ್ವದೇಶಿ ಮಂತ್ರ ಪಠಿಸಿದರು ಎಂದು ಹೇಳಿದರು.

ನೋಟು ರದ್ಧತಿಯ ಮೂಲಕ ಕಾಳ ಧನಿಕರ ಎದೆ ನಡುಗಿಸುವ ಕೆಲಸ ಮಾಡ ಲಾಗಿದೆ. ಹಾಸಿಗೆ, ದಿಂಬು, ಶೌಚಾಲ ಯದ ಗೋಡೆ, ಬಣವೆ, ಪಾಯಿ ಖಾನೆಯ ಅಡಿ ಸಂಗ್ರಹಿಸಿ ಇಟ್ಟಿದ್ದ ಸಾವಿ ರಾರು ಕೋಟಿ ರೂಪಾಯಿ ಸರ್ಕಾರದ ವಶವಾಗಿದೆ. ಇದರಿಂದ ಶೂನ್ಯ ಬ್ಯಾಲೆನ್ಸ್ ಹೊಂದಿದ್ದ ಸಾವಿರಾರು ಬಡವರ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಹರಿದುಬಂದಿದೆ ಎಂದರು.

ರಾಜ್ಯಗಳ ನಡುವಿನ ವ್ಯಾಪಾರದ ಸ್ಪರ್ಧೆ ನಿವಾರಣೆಗೆ ದೇಶಾದ್ಯಂತ ಜಿಎಸ್‌ಟಿ ಹೆಸರಿನಲ್ಲಿ ಏಕರೂಪದ ತೆರಿಗೆ ಪದ್ಧತಿಯನ್ನು ಮೋದಿ ಅಳವಡಿಸಿದ್ದಾರೆ. ಮುದ್ರಾ ಬ್ಯಾಂಕ್ ಮೂಲಕ ಖಾತರಿ ಇಲ್ಲದೇ ಬಡವರಿಗೆ ₹ 50 ಸಾವಿರದಿಂದ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ಹೆಣ್ಣು ಮಕ್ಕಳ ಅಭ್ಯುದಯಕ್ಕೆ ಬೇಟಿ ಬಚಾವೊ ಕಾರ್ಯಕ್ರಮ ಜಾರಿಗೊಳಿಸಿ ದ್ದಾರೆ ಎಂದು ಸವದಿ ಹೇಳಿದರು.

ಸಮಾರಂಭದಲ್ಲಿ ಸಂಸದ ಪಿ.ಸಿ.ಗದ್ದಿ ಗೌಡರ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಶ್ರೀಕಾಂತ ಕುಲಕರ್ಣಿ, ಎಂ.ಕೆ.ಪಟ್ಟಣ ಶೆಟ್ಟಿ, ರಾಜಶೇಖರ ಶೀಲವಂತ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಜಿ.ಎಸ್. ನ್ಯಾಮಗೌಡ, ನಾರಾಯಣ ಸಾ ಭಾಂಡಗೆ ಪಾಲ್ಗೊಂಡಿದ್ದರು.

2.16 ಕೋಟಿ ಕುಟುಂಬಗಳಿಗೆ  ಸಿಲಿಂಡರ್
ಬಾಗಲಕೋಟೆ: ಉಳ್ಳವರಿಂದ ಸಬ್ಸಿಡಿ ಅನಿಲ ಸಿಲಿಂಡರ್ ಸಂಪರ್ಕ ವಾಪಸ್ ಪಡೆದು ಅದನ್ನು ದೇಶದ 2.16 ಕೋಟಿ ಬಡ ಕುಟುಂಬಗಳಿಗೆ ನೀಡುವ ಅರ್ಥ ಪೂರ್ಣ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಸಚಿವ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಯೋಜ ನೆಗಳಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ರಾಜ್ಯದ ಕುಡಿಯುವ ಯೋಜನೆಗಳಿಗೆ ಸಂಬಂಧಿ ಸಿದ ₹ 42 ಸಾವಿರ ಕೋಟಿ ವೆಚ್ಚದ ಯೋಜನೆ ರೂಪಿಸಲು ಸೂಚಿಸಿ ತಿಂಗಳುಗಳು ಕಳೆದರೂ ಇಲ್ಲಿಯವರೆಗೂ ಆ ಕೆಲಸ ಪೂರ್ಣಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

2030ರ ವೇಳೆಗೆ ದೇಶದ ಎಲ್ಲಾ ಮನೆಗಳಿಗೂ ನಳದ ಸಂಪರ್ಕ ಕಲ್ಪಿಸಿ ನೀರು ಪೂರೈಕೆ ಮಾಡುವ ಯೋಜನೆ ಕೇಂದ್ರ ಸರ್ಕಾರ ಹೊಂದಿದೆ. ಅದಕ್ಕಾಗಿ ₹ 5 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ಹಂತ ಹಂತವಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಅವರ ಪ್ರಯತ್ನದಿಂದ ಸ್ವಚ್ಛ ಭಾರತ ಆಂದೋಲನ ಇಂದು ಜನಾಂದೋಲವಾಗಿ ರೂಪುಗೊಂಡಿದೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.