ರಬಕವಿ ಬನಹಟ್ಟಿ: ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ಬಾರಿ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಮಾಡುತ್ತಿದ್ದಾರೆ.
ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಯ ತಗ್ಗು ಪ್ರದೇಶದಲ್ಲಿ ನಿಂತ ನೀರನ್ನು ಹೊಲ ತೋಟಗಳಿಗೆ ಹಾಯಿಸಲು ರೈತರು ಪೈಪ್ಗಳನ್ನು ಜೋಡಿಸುತ್ತ, ನದಿಯ ತೀರದಲ್ಲಿ ಕುಳಿತು ಪರದಾಡುತ್ತಿದ್ದಾರೆ. ಬಾವಿಗಳು ಖಾಲಿಯಾಗಿದ್ದು, ಬೋರ್ವೆಲ್ಗಳಲ್ಲಿಯ ಅಂತರ್ಜಲ ಮಟ್ಟ ಬಹಳಷ್ಟು ಕಡಿಮೆಯಾಗಿದ್ದರಿಂದ ರೈತರ ಬೆಳೆಗಳಿಗೆ ನೀರು ಸಾಕಾಗುತ್ತಿಲ್ಲ. ಆದ್ದರಿಂದ ಕೃಷಿಕರು ಹಗಲು ರಾತ್ರಿ ಎನ್ನದೆ, ಬಿಸಿಲನ್ನು ಲೆಕ್ಕಿಸದೆ ನದಿಯಲ್ಲಿ ಅಳಿದುಳಿದ ನೀರನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ನದಿ ತೀರದಲ್ಲಿ ತ್ಯಾಜ್ಯ ವಸ್ತುಗಳು ಸಂಗ್ರಹಗೊಂಡಿವೆ. ನದಿ ತೀರದಲ್ಲಿ ಬಟ್ಟೆಗಳನ್ನು ತಂದು ರಾಶಿ ಹಾಕಲಾಗಿದೆ. ಕೊಳೆತ ಪ್ಲಾಸ್ಟಿಕ್ ಚೀಲಗಳು, ಬೇಡವಾಡ ದೇವರ ಫೋಟೊಗಳು ಹಾಗೂ ಪೂಜಾ ಸಾಮಗ್ರಿಗಳಿಂದ ನದಿ ತೀರವು ತುಂಬಿ ಹೋಗಿದೆ.
ಮುಂದೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಸರ್ಕಾರ ನೂತನ ಜನಪ್ರತಿನಿಧಿಗಳು ಗಮನ ವಹಿಸಿ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರನ್ನು ಬಿಡಿಸುವ ವ್ಯವಸ್ಥೆಯನ್ನು ಮಾಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.